ಬಂಟ್ವಾಳ : ಸಿದ್ಧರಾಮಯ್ಯ ಸ್ಪರ್ಧಿಸಲು ಜಾಗ ಹುಡುಕುತ್ತಾ ಇದ್ದಾರೆ, ಅವರಿಗೆ ತಾಕತ್ತಿದ್ದರೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ವಿರುದ್ಧ ಸ್ಪರ್ಧಿಸಲಿ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ಬಂಟ್ವಾಳಬಿಜೆಪಿ ಹಾಗೂ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ವಿಕಾಸ ಯಾತ್ರೆಯ ಅಂಗವಾಗಿ ಸಿದ್ಧಕಟ್ಟೆಯಲ್ಲಿ ನಡೆದ ಒಂಭತ್ತನೇ ದಿನದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದುತ್ವವನ್ನು ವಿರೋಧ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ವನಾಶದ ಹಂತದಲ್ಲಿದೆ ಎಂದ ಅವರು ಜನಸೇವೆ ಮಾಡುವ ಮೂಲಕ ರಾಜೇಶ್ ನಾಯ್ಕ್ ರವರು ಜನಗಳ ಹೃದಯದಲ್ಲಿ ನೆಲೆಸಿದ್ದಾರೆ. ಕಾಂಗ್ರೆಸ್ ಸಂಪೂರ್ಣವಾಗಿ ಸೋಲಿನ ಭೀತಿಯಲ್ಲಿದ್ದು, ರಮಾನಾಥ ರೈ ಬಂಟ್ವಾಳದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಠೇವಣಿ ಯನ್ನೂ ಕಳೆದುಕೊಳ್ಳುತ್ತಾರೆ ಎಂದರು. ಎಸ್ ಡಿ ಪಿ ಐ ಅಭ್ಯರ್ಥಿ ಇದ್ದಾರೆ ಎಂದು ಹೇಳುತ್ತಿದ್ದಾರೆ, ಅವರಿಗೆ ತಾಕತ್ತಿದ್ರೆ 25 ಸಾವಿರ ಮುಸ್ಲಿಮರ ಓಟು ತೆಗೆಯಲಿ, ಚುನಾವಣೆ ಹತ್ತಿರದ ಬರುವಾಗ ನಾಮಪತ್ರ ವಾಪಸು ತೆಗೆಯುವುದಲ್ಲ ಎಂದು ವ್ಯಂಗ್ಯವಾಡಿದರು.ಕಾಂಗ್ರೇಸ್ ಗೆ ಕೊಡುವ ಒಂದೊಂದುಓಟು ಕೂಡ ಒಬ್ಬೊಬ್ಬ ಭಯೋತ್ಪಾದಕರನ್ನು ಸೃಷ್ಟಿಸುತ್ತದೆ ಎಂದರು.
ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ನಿಗಮದ ನಿರ್ದೇಶಕಿ ಸುಲೋಚನಾ ಜಿಕೆ.ಭಟ್ ಮಾತನಾಡಿ, ಕ್ಷೇತ್ರದ ಜನತೆ ಹಾಗೂ ಬಿಜೆಪಿ ಕಾರ್ಯಕರ್ತರು ಹೆಮ್ಮೆ ಪಡುವಂತಾ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡುವ ಸಂಕಲ್ಪ ತೊಟ್ಟು ಕೆಲಸ ಮಾಡಿದ್ದೇನೆ, ಜನತೆ ನೀಡಿದ ಪ್ರೀತಿ ವಿಶ್ವಾಸಕ್ಕೂ ನಾನು ಚಿರ ಋಣಿಯಾಗಿದ್ದೇನೆ ಎಂದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಪಾದಯಾತ್ರೆಯ ಸಹಸಂಚಾಲಕರಾದ ಮಾಧವ ಮಾವೆ, ಸುದರ್ಶನ್ ಬಜ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಕುಕ್ಕಿಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತ, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಕೆ.ಎಂ.ಎಫ್. ಅಧ್ಯಕ್ಷ ಸುಚರಿತ ಶೆಟ್ಟಿ ಯವರು ಮಾತನಾಡಿ, ಮುಂದಿನ ಚುನಾವಣೆಯಲ್ಲಿಯೂ ರಾಜೇಶ್ ನಾಯ್ಕ್ ಗೆಲುವು ನಿಶ್ಚಿತ ಎಂದರು.
ಪಾದಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ 9ನೇ ದಿನದ ಪಾದಯಾತ್ರೆ ಸಾಗಿಬಂದ ಐದು ಗ್ರಾ.ಪಂ.ಗಳಿಗೆ ಒದಗಿಸಿದ ಅನುದಾನದ ವಿವರ ನೀಡಿದರು.
ಬಿಜೆಪಿ ಮಂಡಲದ ಕಾರ್ಯದರ್ಶಿ ರಮಾನಾಥ ರಾಯಿ ಸ್ವಾಗತಿಸಿದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.