ಬಂಟ್ವಾಳ: ಭ್ರಷ್ಟಾಚಾರದಲ್ಲೇ ಆಡಳಿತ ನಡೆಸಿದ ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ವಾಗಿದೆ. ವಿಐಪಿ ಸಂಸ್ಕೃತಿ ತೆಗೆದು ಹಾಕಿ ಹೊಸ ಇತಿಹಾಸ ಬರೆದ ಬಿಜೆಪಿ, ಕೋವಿಡ್ ಸಮಯದಲ್ಲಿ ದೇಶವನ್ನು ನಿರ್ವಹಿಸಿದ ರೀತಿ ಅತ್ಯದ್ಭುತ. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಹಿತ ಎಲ್ಲಾ ಜನರಿಗೂ ನೆಮ್ಮದಿ ಸಿಗಲಿದೆ. ಭಾರತದಲ್ಲಿ ಕಾಂಗ್ರೆಸ್ ಬೇಡ ಎಂಬ ನಿರ್ಧಾರಕ್ಕೆ ಜನ ಬಂದಿದ್ದಾರೆ. ಪಕ್ಷ ಗೆಲ್ಲಬೇಕು. ಎಲ್ಲರಿಗೂ ಬಿಜೆಪಿ ಗೆಲ್ಲಬೇಕು ಎಂಬ ಭಾವನೆಯಿದೆ. ಕಾಂಗ್ರೆಸ್ ರಿವರ್ಸ್ ಗೇರ್ ನಲ್ಲಿ ಹೋಗುತ್ತಿದ್ದು, ಬಿಜೆಪಿ ಡಬಲ್ ಇಂಜಿನ್ ನಲ್ಲಿ ಹೋಗುತ್ತಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.
ಅವರು ವಿಟ್ಲ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸಿ, ಜೈನ ಬಸದಿ ಸಮೀಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಶಾಸಕ ಸಂಜೀವ ಮಠಂದೂರು ಮಾತನಾಡಿ ಕೇಂದ್ರ,ರಾಜ್ಯ ಸರ್ಕಾರದ ಯೋಜನೆಗಳು ಸ್ವಾವಲಂಬಿ ಬದುಕಿಗೆ ಕಾರಣವಾಗಿದೆ. ಸ್ವಾಸ್ಥ್ಯ, ಸುರಕ್ಷಿತ, ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಮೋದಿ ಕಾರಣರಾಗಿದ್ದಾರೆ. ಗ್ಯಾರಂಟಿ ಕಾರ್ಡ್ ನೀಡದೇ ಗ್ಯಾರಂಟಿ ಕಾರ್ಯಕ್ರಮ ನೀಡಿದೆ. ಶಾಂತಿ ಸೌಹಾರ್ದತೆಗಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾಗಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮಾತನಾಡಿ ಕಾರ್ಯಕರ್ತರ ಶ್ರಮದಿಂದ ಗೆಲವು ಸಾಧಿಸಲಾಗಿದೆ. ಮನಸ್ಸಿಗೆ ಯಾವಾಗಲೂ ವಯಸ್ಸು ಆಗುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಮೂಲೆ ಮೂಲೆಗೆ ತಲುಪಿಸುವ ಕಾರ್ಯ ಮಾಡಿದ್ದು, ಅದನ್ನು ಮತವಾಗಿ ಪರಿವರ್ತಿಸಬೇಕು. ವ್ಯಕ್ತಿ ನಗಣ್ಯವಾಗಿದ್ದು, ಅಪಪ್ರಚಾರಗಳಿಗೆ ಕಿವಿ ಕೊಡದೆ ಪಕ್ಷ ಮುಖ್ಯ ಎಂದು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ರಾಷ್ಟೀಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್, ರೈತ ಮೋರ್ಚಾ ಕಾರ್ಯದರ್ಶಿ ರೇಣುಕಾ ಪ್ರಸಾದ್, ಸಹಜ್ ರೈ ಬಳಜ್ಜ, ನವೀನ್ ಪಡ್ನೂರು, ಸುನಿಲ್ ದಡ್ಡು, ಕಿಶೋರ್ ಬೊಟ್ಯಾಡಿ, ಮೀನಾಕ್ಷಿ ಶಾಂತಿಗೋಡು, ಕೆ.ಟಿ. ಶೈಲಜಾ ಭಟ್, ಯಶಸ್ವಿನಿ ಶಾಸ್ತ್ರೀ, ಹರಿಪ್ರಸಾದ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿದರು. ರವೀಶ್ ಶಿವಾಜಿ ನಗರ ವಂದಿಸಿದರು. ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.