ಬಂಟ್ವಾಳ: ತಾಲೂಕಿನ ಸಜೀಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ಭೋರ್ಗರೆಯುವ ನೇತ್ರಾವತಿ ನದಿಗೆ ಈಜಲು ಹೋಗಿರುವ ಐವರು ಯುವಕರ ತಂಡ, ಇದರಲ್ಲಿ ಓರ್ವ ಯುವಕ ನೀರು ಪಾಲಾದರೆ ಇನ್ನುಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಈ ಪೈಕಿ ಓರ್ವ ಯುವಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಯಾವುದೇ ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ.
ತಲೆಮೊಗರು ನಿವಾಸಿ ರುಕ್ಮಯ ಅವರ ಮಗ ಅಶ್ವಿಥ್ (19) ನೀರು ಪಾಲಾದ ಯುವಕ. ಹರ್ಷಿತ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದಂತೆ ಸ್ನೇಹಿತರಾದ ಲಿಖಿತ್ , ವಿಕೇಶ್ , ವಿಶಾಲ್ ಅವರನ್ನು ರಕ್ಷಣೆ ಮಾಡಲಾಗಿದೆ.
ಸ್ನೇಹಿತರಾದ ಐವರು ಸಂಜೆ 4 ಗಂಟೆ ವೇಳೆಗೆ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದಾರೆ ಎಂದು ಹೇಳಲಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಮಿತಿಮೀರಿ ಹರಿಯುತ್ತಿದ್ದು ಅಪಾಯಕಾರಿ ಎಂದು ಗೊತ್ತಿದ್ದು, ಮಕ್ಕಳು ಈ ರೀತಿಯಲ್ಲಿ ನದಿಗೆ ಇಳಿಯುವುದರ ಬಗ್ಗೆ ಮನೆಯವರು ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಭೇಟಿ ನೀಡಿ ನೀರು ಪಾಲಾದ ಅಶ್ವಿಥ್ ನ ಪತ್ತೆಗಾಗಿ ಸ್ಥಳೀಯ ಮುಳುಗು ತಜ್ಞರ ಸಹಾಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ. ಆದರೆ ರಾತ್ರಿಯಾದರೂ ಹರ್ಷಿತ್ ಪತ್ತೆಯಾಗಿಲ್ಲ.
ಇಬ್ಬರು ಯುವಕರಿಂದ ರಕ್ಷಣೆ
ತಲೆಮೊಗರು ನಿವಾಸಿ ಹರೀಶ್ ಮತ್ತು ರಾಜೇಶ್ ಎಂಬವರು ಇಬ್ಬರು ಯುವಕರನ್ನು ರಕ್ಷಣೆ ಮಾಡಿದ್ದಾರೆ. ಹರೀಶ್ ಮತ್ತು ರಾಜೇಶ್ ಅವರು ನದಿ ತೀರದಲ್ಲಿ ಕುಳಿತು ಮಾತನಾಡಿಕೊಂಡಿದ್ದರು.
ಯುವಕರು ನೀರಿಗೆ ಇಳಿದು ಈಜಾಡುತ್ತಿದ್ದು, ಕೆಲವೇ ಹೊತ್ತಿನಲ್ಲಿ ಬೊಬ್ಬೆ ಹಾಕುವುದು ಕೇಳಿ ಬಂತು, ಆದರೆ ಯುವಕರು ನೀರಿನಲ್ಲಿ ಆಡುತ್ತಿರಬೇಕು ಎಂದು ಸುಮ್ಮನಿದ್ದರೆ ಜೋರಾಗಿ ಕಿರುಚಾಡುವುದನ್ನು ಅರಿತು ಸ್ಥಳಕ್ಕೆ ಓಡಿ ಹೋಗಿ ನೋಡಿದಾಗ ಇಬ್ಬರು ಯುವಕರು ನೀರಿನಿಂದ ಮೇಲೆ ಬಂದಿದ್ದರು.
ಇನ್ನಿಬ್ಬರು ನೀರಿನಲ್ಲಿ ಮುಳುಗೇಳುತ್ತಿದ್ದು ಕಂಡು ಬಂದಿತ್ತು. ಕೂಡಲೇ ನಾವಿಬ್ಬರು ನೀರಿಗೆ ಹಾರಿ ಹರ್ಷಿತ್ ಮತ್ತು ವಿಕೇಶ್ ಎಂಬವರನ್ನು ಬಚಾವ್ ಮಾಡಿ ದಡಕ್ಕೆ ತಂದಿದ್ಧೇವೆ. ಅದಾಗಲೇ ಅಶ್ವಿಥ್ ಮುಳುಗಿ ಆಗಿದೆ ನಮಗೆ ಸುಳಿವು ಸಿಕ್ಕಿಲ್ಲ.ಅದೇ ಸಮಯದಲ್ಲಿ ಇನ್ನೊಬ್ಬ ರು ಈಜುಗಾರರು ಇದ್ದಿದ್ದರೆ ಅಶ್ವಿಥ್ ನನ್ನು ಕೂಡ ಬಚಾವ್ ಮಾಡಬಹುದಿತ್ತು. ಬಳಿಕ ನಾವು ತುಂಬಾ ಪ್ರಯತ್ನ ಮಾಡಿದ್ದೇವೆ ಆದರೂ ಆತನ ಸುಳಿವು ಸಿಕ್ಕಿಲ್ಲ ಎಂದು ಬಾಲಕರನ್ನು ರಕ್ಷಣೆ ಮಾಡಿದ ಸ್ಥಳೀಯ ನಿವಾಸಿ ಹರೀಶ್ ಅವರು ಹೇಳಿದರು.