ಮಂಗಳೂರು: ರಿಕ್ಷಾದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋಮಾಂಸವನ್ನು ಪತ್ತೆಹಚ್ಚಿದ ಬಜರಂಗದಳದ ಕಾರ್ಯಕರ್ತರು ಆರೋಪಿ ಸಹಿತ ಸೊತ್ತನ್ನು ಉರ್ವ ಠಾಣಾ ಪೊಲೀಸರಿಗೊಪ್ಪಿಸಿದ ಘಟನೆ ಉರ್ವ ಸ್ಟೋರ್ನ ಚಿಲಿಂಬಿ ಬಳಿ ನಡೆದಿದೆ.
ಬೆಳ್ಳಂಬೆಳಗ್ಗೆ ಗೋಮಾಂಸವನ್ನು ಜೋಕಟ್ಟೆಯಿಂದ ರಿಕ್ಷಾದಲ್ಲಿ ನಗರದ ಬೀಫ್ ಸ್ಟಾಲ್ಗಳಿಗೆ ಸಾಗಾಟ ಮಾಡಲಾಗುತ್ತಿತ್ತು. ಗೋಮಾಂಸ ಸಾಗಾಟದ ಮಾಹಿತಿ ತಿಳಿದು ಬಜರಂಗದಳದ ಕಾರ್ಯಕರ್ತರು 6 ಗಂಟೆಯ ವೇಳೆಗೆ ಚಿಲಿಂಬಿಯಲ್ಲಿ ರಿಕ್ಷಾವನ್ನು ತಡೆದು ಆರೋಪಿಯನ್ನು ಮಾಲು ಸಹಿತ ಪೊಲೀಸರಿಗೊಪ್ಪಿಸಿದ್ದಾರೆ. ಐದು ಗೋವುಗಳ 2.50 ಕ್ವಿಂಟಾಲ್ ಮಾಂಸವನ್ನು ರಿಕ್ಷಾದಲ್ಲಿ ಸಾಗಾಟ ಮಾಡಲಾಗುತ್ತಿತ್ತು.
ಜೋಕಟ್ಟೆಯ ಬದ್ರು ಎಂಬಾತನಿಗೆ ಸೇರಿದ ಈ ಗೋಮಾಂಸವನ್ನು ದಾವೂದ್ ಎಂಬಾತ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ. ಈ ಮಾಂಸ ಮಾರುಕಟ್ಟೆಯ ಮಾಂಸದಂಗಡಿಯ ಯಾಸಿನ್ ಎಂಬಾತನಿಗೆ ಸಾಗಾಟ ಮಾಡಲಾಗುತ್ತಿತ್ತು. ಎರಡು ತಿಂಗಳಿನಿಂದ ಈ ರೀತಿಯಲ್ಲಿ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಯೇ ಬಜರಂಗದಳದ ಕಾರ್ಯಕರ್ತರಲ್ಲಿ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ತಕ್ಷಣ ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಹಾಗೂ ಸೊತ್ತನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ, ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ