ಗುರುವಾಯನಕೆರೆ: ಗುರುವಾಯನಕೆರೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಳ್ಳಲು ಓಡಿದಾಗ ಓರ್ವ ರಸ್ತೆಗೆ ಬಿದ್ದು, ಗಾಯಗೊಂಡ ಘಟನೆ ಎ. ೨೬ರಂದು ಗುರುವಾಯನಕೆರೆಯಲ್ಲಿ ಸಂಭವಿಸಿದೆ. ಪೊಲೀಸರು ಬೆನ್ನಟ್ಟಿ ಇಬ್ಬರನ್ನು ಬಂಧಿಸಿದ್ದಾರೆ.
ಗುರುವಾಯನಕೆರೆ ಪರಿಸರರದ ನಿವಾಸಿಗಳಾದ ಮೊಹಮ್ಮದ್ ಅಶ್ರಫ್ ಮತ್ತು ಮಹಮ್ಮದ್ ಖೈಸ್ ಬಂಧಿತ ಆರೋಪಿಗಳಾಗಿದ್ದು, ಅರೋಪಿಗಳಿಂದ ಸುಮಾರು ರೂ. ೧೦ ಸಾವಿರ ಮೌಲ್ಯದ ೨೯೪ ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗುರುವಾಯನಕೆರೆಯ ಸರಕಾರಿ ಪ್ರೌಢ ಶಾಲಾ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಇಬ್ಬರು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಪಡೆದುಕೊಂಡ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಹರೀಶ್ ಎಮ್. ಆರ್ ರವರು ಸಿಬ್ಬಂದಿಗಳ ಜೊತೆ ವಿಧಾನ ಸಭಾ ಚುನಾವಣಾ ಕರ್ತವ್ಯದ ಎಫ್. ಟಿ. ಎಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಬರಮಾಡಿಕೊಂಡು ಅವರನ್ನು ಇಲಾಖಾ ಜೀಪಿನಲ್ಲಿ ಕುಳ್ಳಿರಿಸಿಕೊಂಡು ಸ್ಥಳಕ್ಕೆ ದಾಳಿ ನಡೆಸಿದಾಗ, ಇಬ್ಬರು ವ್ಯಕ್ತಿಗಳು ಪೊಲೀಸ್ ಜೀಪನ್ನು ಕಂಡು ಕೈಯಲ್ಲಿದ್ದ ಪ್ಲಾಸ್ಟಿಕ್ ಜಿಪ್ ಕವರಿನ ಕಟ್ಟನ್ನು ಸ್ಥಳದಲ್ಲೇ ಎಸೆದು ಪರಾರಿಯಾದರೆನ್ನಲಾಗಿದೆ.
ಆರೋಪಿಗಳನ್ನು ಹಿಡಿಯಲು ಪೊಲೀಸರು ಬೆನ್ನಟ್ಟಿದಾಗ ಮಹಮ್ಮದ್ ಖೈಸ್ ಓಡುವ ಯತ್ನದಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಜಾರಿ ಬಿದ್ದು ತಲೆಗೆ ಗಾಯಗೊಂಡನೆನ್ನಲಾಗಿದೆ. ಆತನನ್ನು ಹಿಡಿದು ವಿಚಾರಿಸಿ, ಸ್ಥಳದಲ್ಲಿ ಬಿಸಾಡಿದ ಪ್ಲಾಸ್ಟಿಕ್ ಜಿಪ್ ಕವರಲ್ಲಿದ್ದ ವಸ್ತುವನ್ನು ತೆರೆದು ನೋಡಲಾಗಿ ಅದರಲ್ಲಿ ಗಾಂಜಾದ ಹೂ, ಮೊಗ್ಗುಗಳು, ಬೀಜಗಳು ಇರುವುದು ಪತ್ತೆಯಾಯಿತು. ಸುಮಾರು ರೂ. ೧೦ ಸಾವಿರ ಮೌಲ್ಯದ ೨೯೪ ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.