ಮಂಗಳೂರು: ಮಂಗಳೂರಿನಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 3 ರಿಂದ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲರು ಸಂದೇಶ ನೀಡಲಿದ್ದಾರೆ.
ಜುಲೈ 7 ರಂದು ಸಿಎಂ ರಾಜ್ಯದ ಮುಂಗಡ ಪತ್ರ ಮಂಡಿಸುತ್ತಾರೆ. ಶಾಸಕರೆಲ್ಲರ ಭಾಗವಹಿಸುವಿಕೆ ಅಧಿವೇಶನದಲ್ಲಿ ಆಗಬೇಕು. ಪದವಿ ಕಲಿತ ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ತರಬೇತಿ ಕೇಂದ್ರಗಳು ಇಲ್ಲ. ಹಾಗಾಗಿ ರಾಜಕೀಯ ತರಬೇತಿ ಸಂಸ್ಥೆ ಪ್ರಾರಂಭಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿ ಮಾಡಲಿದ್ದೇವೆ. ಸದ್ಯ ಪುಣೆಯಲ್ಲಿ ಇದೆ, ಅವರ ಜೊತೆ ಚರ್ಚಿಸಿ ಒಂದು ವರ್ಷದ ಕೋರ್ಸ್ ಆರಂಭಿಸಲಿದ್ದೇವೆ. ಎಲ್ಲರಿಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವ ಉದ್ದೇಶವಿದೆ. ಕೇವಲ ಎಂಎಲ್ ಎ, ಎಂಪಿ ಅಷ್ಟೇ ಅಲ್ಲದೇ ಎಲ್ಲರಿಗೂ ತಿಳಿಸೋ ಉದ್ದೇಶ.
ರಾಜ್ಯದ ಪ್ರಮುಖ ಕೇಂದ್ರದಲ್ಲೇ ಇದನ್ನು ಸ್ಥಾಪಿಸಲಾಗುವುದು, ಇದಕ್ಕೆ ಸಿಲೇಬಸ್ ಇರಲಿದೆ, ಫುಲ್ ಟೈಮ್ ಉಪನ್ಯಾಸಕರು ಇರ್ತಾರೆ. ಮಧ್ಯೆ ರಾಜಕೀಯ ನಾಯಕರು, ಮುತ್ಸದ್ದಿಗಳು ಬಂದು ತರಬೇತಿ ಕೊಡ್ತಾರೆ. ಆರು ತಿಂಗಳು ಕಲಿತು ಇಂಟರ್ನ್ ಶಿಪ್ ಮುಗಿಸಬಹುದು. ಆ ಬಳಿಕ ಒಳ್ಳೆಯ ನಾಯಕ ಆಗಬಹುದು, ಅದರ ಜೊತೆಗೆ ಶಾಸಕರ ಬಳಿಯೂ ಕೆಲಸ ಮಾಡಬಹುದು. ಸಭಾಪತಿ ಕೆಲಸ ಮಾತನಾಡೋದಲ್ಲ, ಸಭೆಯನ್ನು ಚೆನ್ನಾಗಿ ನಡೆಸುವುದು ಎಂದು ತಿಳಿಸಿದರು.