ಮಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಬೆನ್ನಲ್ಲೆ ಪುತ್ತೂರು ಬಿಜೆಪಿಯಲ್ಲಿ ಬಂಡಾಯದ ರಣಕಹಳೆ ಜೋರಾಗಿದೆ. ಬಿಜೆಪಿ ಟಿಕೆಟ್ ಕೈ ತಪ್ಪಿದ ಬಿಸಿಯಲ್ಲಿ ಸಂಜೀವ ಮಠಂದೂರು ತೀವ್ರ ಅಸಮಾಧಾನಗೊಂಡಿದ್ದಾರೆ. ಮತ್ತೊಂದೆಡೆ ಹಿಂದು ಸಂಘಟನೆ ಮುಖಂಡ ಅರುಣ್ ಪುತ್ತಿಲ ತಮ್ಮ ಬೆಂಬಲಿಗರ ಸಭೆ ನಡೆಸಿ ಸಂಘಟನೆ ಮತ್ತು ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
ಈ ನಿಟ್ಟಿನಲ್ಲಿ ಆರ್ಎಸ್ಎಸ್ ನೇರವಾಗಿ ಕಣಕ್ಕಿಳಿದಿದ್ದು, ಸರಣಿ ಸಭೆಗಳ ಮೂಲಕ ಭಿನ್ನಮತೀಯರನ್ನು ಸಮಾಧಾನ ಮಾಡುವ ಕೆಲಸ ಮಾಡಿದೆ.
ಸಭೆ ಮೊಟಕು: ಆರ್ಎಸ್ಎಸ್ ನಡೆಸಿದ ಸಭೆಯಲ್ಲಿ ಪುತ್ತೂರಿನ ಪಕ್ಷದ ಅಭ್ಯರ್ಥಿಯುನ್ನು ಬೆಂಬಲಿಸುವಂತೆ ಭಿನ್ನಮತಿಯರಿಗೆ ಸಲಹೆ ನೀಡಲಾಗಿದೆ. ಈ ವೇಳೆ ಅವರಿಗೆ ಜಾತಿ ಆಧಾರದಲ್ಲಿ ಟಿಕೆಟ್ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಅವರು ಪುತ್ತೂರಿನ ಹೊರಗಿನವರು ಅವರಿಗೆ ಟಿಕೆಟ್ ನೀಡಿರುವುದರಿಂದ ಕಾರ್ಯಕರ್ತರ ಆಕ್ರೋಶ ಶಮನ ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪಕ್ಷ ಮತ್ತು ಸಂಘಟನೆಗೆ ಪ್ರಸ್ತುತ ಅಭ್ಯರ್ಥಿ ಕೊಡುಗೆ ಏನಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಯಾವುದೇ ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಕಾರಣ ಸಭೆ ಮೊಟಕುಗೊಂಡು ಆರ್ಎಸ್ಎಸ್ ಮುಖಂಡರು ತೆರಳಿದ್ದಾರೆ ಎನ್ನಲಾಗಿದೆ. ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಪ್ರಕಾಶ್ ಪಿ.ಎಸ್ ನೇತೃತ್ವದಲ್ಲಿ ಮೊಟಕುಗೊಂಡ ಸಭೆ ನಂತರ ಮತ್ತೊಮ್ಮೆ ಸಭೆ ನಡೆಸಲಾಗಿದೆ.
ಉನ್ನತ ಹುದ್ದೆ ಆಮಿಷ, ಪುತ್ತಿಲ ತಿರಸ್ಕಾರ: ಪುತ್ತೂರಿನಲ್ಲಿ ಮೊನ್ನೆಯಷ್ಟೆ ಅಭಿಮಾನಿಗಳ ಬೃಹತ್ ಸಭೆ ನಡೆಸಿ ತಮ್ಮ ಶಕ್ತಿ ಏನೆಂಬುದನ್ನು ತೋರಿಸಿರುವ ಅರುಣ್ ಕುಮಾರ್ ಪುತ್ತಿಲ ಅವರ ಮನವೊಲಿಕೆಗೆ ಆರ್ ಎಸ್ಎಸ್ ಮುಂದಾಗಿದೆ. ಅರುಣ್ ಕುಮಾರ್ ಪುತ್ತಿಲ ಮತ್ತು ಆಯ್ದ ಸಂಘದ ಪ್ರಮುಖರೊಂದಿಗೆ ಬೈಠಕ್ ನಡೆಸಲಾಗಿದ್ದು, ಪಕ್ಷದಲ್ಲಿ ಉನ್ನತ ಹುದ್ದೆ ನೀಡುವ ಆಶ್ವಾಸನೆ ನೀಡಲಾಗಿದೆ. ಆದರೆ ಈ ಹಿಂದೆ ಎರಡು ಬಾರಿ ಪಕ್ಷದ ಜವಾಬ್ದಾರಿ ನೀಡುವುದಾಗಿ ಹೇಳಿ ಕೈಕೊಟ್ಟ ಮುಖಂಡರ ವಿರುದ್ಧ ಪುತ್ತಿಲ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಪೊಳ್ಳು ಭರವಸೆ ನನಗೆ ಬೇಡ ಎಂದು ಸ್ಪಷ್ಟವಾಗಿ ತಿರಸ್ಕಾರ ಮಾಡಿದ್ದಾರೆ ಎನ್ನಲಾಗಿದೆ.
ಹಿಂದಿನ ಪ್ರಕರಣದಲ್ಲಿ ಕಟ್ಟಿಹಾಕುವ ತಂತ್ರ: ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುವುದು ಖಚಿತವಾದಲ್ಲಿ ಅವರನ್ನು ಈ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ ಕಟ್ಟಿಹಾಕುವ ತಂತ್ರವನ್ನು ಮುಖಂಡರು ಮಾಡಿದ್ದಾರೆ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆ ತಡೆಯುವ ಕುರಿತು ಚರ್ಚೆಗಳಾಗಿವೆ ಎಂದು ತಿಳಿದುಬಂದಿದೆ
ಗುಪ್ತ ಸ್ಥಳದಲ್ಲಿ ಸಭೆ: ಅರುಣ್ ಕುಮಾರ್ ಪುತ್ತಿಲ ಅವರನ್ನು ಸಂಘದ ಮುಖಂಡರು ವಿಟ್ಲದ ಗೌಪ್ಯ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿ ಮೀಟಿಂಗ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.