ಮಂಗಳೂರು, ನ.10: ಮಾನವೀಯ ನೆಲೆಯಲ್ಲಿ ಕೆಲಸ ಮಾಡುವುದರಲ್ಲಿ ಗುರುತಿಸಿಕೊಂಡಿರುವ ಮಂಗಳೂರಿನ ಎಪಿಡಿ ಪ್ರತಿಷ್ಠಾನ ಮತ್ತು ವೆಬ್ ನ್ಯೂಸ್ ಪೋರ್ಟಲ್ ಮಂಗಳೂರು ಮೇರಿ ಜಾನ್ ಜಂಟಿಯಾಗಿ ನಗರದ ತ್ಯಾಜ್ಯ ಸಂಗ್ರಹಿಸುವ ಕುಟುಂಬ ಒಂದರ ಪಾಳುಬಿದ್ದ ಮನೆಯನ್ನು ಮರುನಿರ್ಮಾಣ ಮಾಡುವ ಮೂಲಕ ಪುನರ್ವಸತಿ ಕಲ್ಪಿಸಿದೆ.
ಪಚ್ಚನಾಡಿ ನಿವಾಸಿ ಮಂಗಳಾ ಅವರು ಇದರ ಫಲಾನುಭವಿಗಳಾಗಿದ್ದಾರೆ. ಅವರ ಮನೆಯು ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿತ್ತು. ಕೆಲವು ದಿನಗಳ ಹಿಂದೆ, ಅವರ ಕಚ್ಚಾ ಮನೆಯು ನೆಲಕ್ಕುರುಳಿತ್ತು. ಅವರಿಗೆ ವಾಸಿಸಲು ಆಶ್ರಯವಿಲ್ಲದಂತಾಗಿರುವುದು ಎಪಿಡಿ ಗಮನಕ್ಕೆ ಬಂದಿತ್ತು. ಪತಿ ಅವರನ್ನು ತೊರೆದು ಹೋಗಿದ್ದು, ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ಬದುಕುತ್ತಿದ್ದರು. ಕುಟುಂಬದ ಏಕೈಕ ಆಧಾರವಾಗಿರುವ ಆಕೆ ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದರು. ಮಾಹಿತಿ ತಿಳಿದು ಎಪಿಡಿ ಪ್ರತಿಷ್ಠಾನದ ಕಾರ್ಯಕರ್ತರು ಮಂಗಳಾ ಅವರಲ್ಲಿಗೆ ಭೇಟಿ ನೀಡಿ ಸಮಸ್ಯೆ ವಿಚಾರಿಸಿದ್ದರು.
ನಮ್ಮ ಭೇಟಿಯ ಸಮಯದಲ್ಲಿ, ಮಂಗಳಾ ತನ್ನ ಮಕ್ಕಳೊಂದಿಗೆ ವಾಸಿಸಲು ಕನಿಷ್ಠ ತಾತ್ಕಾಲಿಕ ಆಶ್ರಯವನ್ನಾದರೂ ಒದಗಿಸುವ ಮೂಲಕ ತನಗೆ ಸಹಾಯ ಮಾಡುವಂತೆ ವಿನಂತಿಯನ್ನು ಮಾಡಿದ್ದರು ಎಂದು ಎಪಿಡಿ ಪ್ರತಿಷ್ಠಾನದ ಸಂಯೋಜಕಿ ಗೀತಾ ಸೂರ್ಯ ಹೇಳುತ್ತಾರೆ.
ಆಕೆಯ ಕಷ್ಟಕ್ಕೆ ಸ್ಪಂದಿಸಿದ ಮಂಗಳೂರು ಮೇರಿ ಜಾನ್ ವೆಬ್ ನ್ಯೂಸ್ ಪೋರ್ಟಲ್ ಎಪಿಡಿ ಫೌಂಡೇಶನ್ನೊಂದಿಗೆ ಕೈಜೋಡಿಸಲು ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿತು. ಅವರು 30,693 ರೂ.ಗಳಷ್ಟು ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು. ಇನ್ನು ಕೆಲವು ದಾನಿಗಳು ನೇರವಾಗಿ 3200 ರೂ. ನೀಡಿದ್ದಾರೆ. ತಕ್ಷಣದ ಪರಿಹಾರ ನೀಡಲು 33,893 ರೂ. ಸಂಗ್ರಹವಾಗಿರುವುದು ಸಾಕಾಗಿತ್ತು.
ಕಾರ್ಮಿಕರು ಶಿಥಿಲಗೊಂಡ ಮನೆಯನ್ನು ಕಳಚಿ ಮತ್ತು ಹಳೆಯ ಮನೆಯಿಂದ ಮರುಬಳಕೆ ಮಾಡಬಹುದಾದ ಕೆಲವು ವಸ್ತುಗಳನ್ನು ಬಳಸಿಕೊಂಡು ಘನ ಮರದ ಕಂಬಗ ಳೊಂದಿಗೆ ಎತ್ತರಿಸಿದ ಅಡಿಪಾಯದ ವೇದಿಕೆಯ ಮೇಲೆ ಮನೆಯನ್ನು ಪುನರ್ನಿರ್ಮಿಸಲಾಯಿತು. ಬಾಹ್ಯ ಗೋಡೆಗೆ ಪರ್ಯಾಯವಾಗಿ ಜಲನಿರೋಧಕ ಪಿವಿಸಿ ಹಾಳೆಗಳನ್ನು ಒದಗಿಸಲಾಯಿತು. ಛಾವಣಿಗಾಗಿ ಹಿಂದಿದ್ದ ಹಳೆಯ ಮನೆಯ ರಬ್ಬರ್ ಶೀಟ್ ಅನ್ನು ಉಳಿಸಿಕೊಳ್ಳಲಾಯಿತು. ಗಾಳಿ ಆಡುವಂತೆ ಸಾಕಷ್ಟು ತೆರೆದ ಸ್ಥಳಗಳನ್ನು ಇರಿಸಲಾಗಿದೆ. ಎಪಿಡಿ ಪ್ರತಿಷ್ಠಾನ ಮತ್ತು ಹಸಿರು ದಳದ ಹಿಂದಿನ ಉಪಕ್ರಮದ ಅಡಿಯಲ್ಲಿ ಕುಟುಂಬಕ್ಕೆ ಈ ಹಿಂದೆಯೇ ಸೌರ ದೀಪದ ಸೌಲಭ್ಯವನ್ನು ಒದಗಿಸಲಾಗಿತ್ತು. ಕುಟುಂಬವು ಈಗ ಸುರಕ್ಷಿತ ಮತ್ತು ಆರಾಮವಾಗಿ ಬದುಕಲು ಸಾಧ್ಯವಾಗುತ್ತದೆ.
“ತ್ಯಾಜ್ಯ ಸಂಗ್ರಹಿಸುವವರು ನಿಜವಾಗಿಯೂ ಸಮಾಜದ ನಿರ್ಲಕ್ಷಿತ ಸದಸ್ಯರು. ಅವರು ನಗರವನ್ನು ಸ್ವಚ್ಛವಾಗಿಡಲು ಬಹಳಷ್ಟು ಕೊಡುಗೆ ನೀಡುತ್ತಾರೆ ಮತ್ತು ತ್ಯಾಜ್ಯದಿಂದ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹ ಮಾಡುವ ಮೂಲಕ ಪರಿಸರಕ್ಕೆ ಸಹಾಯ ಮಾಡುತ್ತಾರೆ. ಅವರಿಗೆ ಸಾಮಾಜಿಕ ಭದ್ರತೆಯ ಕೊರತೆಯಿದೆ. ಒಟ್ಟಾರೆ ಸಮಾಜವು ಅವರ ಕಲ್ಯಾಣಕ್ಕಾಗಿ ಎಚ್ಚೆತ್ತುಕೊಳ್ಳಬೇಕು.” ಎಂದು ಎಪಿಡಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್ ಹೇಳುತ್ತಾರೆ.