ಬೆಳ್ತಂಗಡಿ: ಹುಲಿ ಗಣತಿ ಯೋಜನೆಯ ಅಂಗವಾಗಿ ನಡೆಯುತ್ತಿರುವ ಕ್ಯಾಮೆರಾ ಟ್ರ್ಯಾಪಿಂಗ್ ನಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುರುಬರ ಗುಡ್ಡದ ಕಾಡು ಮನೆ ಪ್ರದೇಶದಲ್ಲಿ ಚಿರತೆ, ಕರಡಿ ಹಲವು ಬಾರಿ ಅಲ್ಲಿ ಇರಿಸಲಾಗಿರುವ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಈ ಪ್ರದೇಶದಲ್ಲಿ ಚಿರತೆ ಕರಡಿ ಓಡಾಟ ನಿರಂತರವಾಗಿರುವುದು ದೃಢಪಟ್ಟಿದೆ. ಇಲ್ಲಿ ಚಿರತೆ,ಕರಡಿ ಆಗಾಗ ಕಂಡು ಬರುತ್ತಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.ಆದರೆ ಇದುವರೆಗೆ ಯಾವುದೇ ಹೆಚ್ಚಿನ ಅಪಾಯ ಉಂಟು ಮಾಡಿಲ್ಲ. ಅಲ್ಲದೆ ಕಾಡುಹಂದಿ, ಮುಳ್ಳುಹಂದಿ, ಜಿಂಕೆ ಮೊದಲಾದ ಪ್ರಾಣಿಗಳು ಕೂಡ ಕ್ಯಾಮೆರಾ ಎದುರು ಅನೇಕಬಾರಿ ಓಡಾಟ ನಡೆಸಿವೆ.
ತೋಟತ್ತಾಡಿಯಲ್ಲಿ ಇರಿಸಲಾಗಿರುವ ಕ್ಯಾಮರಾದಲ್ಲು ಮಾ. 7ರಂದು ಚಿರತೆ ಕಂಡು ಬಂದಿದೆ. ಇದರಿಂದ ಸದ್ಯ ತಾಲೂಕಿನ ಎರಡು ಗ್ರಾಮಗಳಲ್ಲಿ ಚಿರತೆ ಇರುವುದು ದೃಢವಾಗಿದೆ. ತಾಲೂಕಿನಲ್ಲಿ ಹಲವು ಕಡೆ ಕ್ಯಾಮೆರಾ ಟ್ರ್ಯಾಪಿಂಗ್ ನಡೆಸುತ್ತಿರುವ ಪ್ರದೇಶಗಳ ಸುತ್ತಮುತ್ತ ಕಾಡಾನೆಗಳ ಸಂಚಾರವಿದ್ದರು ಅವು ಕ್ಯಾಮೆರಾ ಎದುರು ಕಂಡುಬಂದಿಲ್ಲ.