ಬೆಳ್ತಂಗಡಿ : ಸ್ವಂತಕ್ಕಲ್ಲ ಸಮಾಜಕ್ಕಾಗಿ ಎಂಬ ವಾಗ್ದಾನದದಿಗೆ ಅನೇಕ ಹೋರಾಟಗಳ ಫಲವಾಗಿ ಇಂದು ವಿಶ್ವದಾದ್ಯಂತ ಅತೀ ಹೆಚ್ಚಿನ ಕಾರ್ಯಕರ್ತರನ್ನು ಹೊಂದಿರುವ ಏಕೈಕ ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಅಸ್ತಿತ್ವ ಪಡೆದಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬಿಜೆಪಿ ಮಂಡಲದ ವತಿಯಿಂದ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಫೆ.19 ರಂದು ಹಮ್ಮಿಕೊಂಡ ಹಿರಿಯ ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ವಿಚಾರವಾಗಿ ಹಿರಿಯರ ಮಾರ್ಗದರ್ಶನದಲ್ಲಿ ಕೋಟ್ಯಾಂತರ ಕಾರ್ಯಕರ್ತರನ್ನು ಹೊಂದಿರುವ ಜನಸಂಘದಿಂದ ಬಂದ ಭಾರತೀಯ ಜನತಾ ಪಾರ್ಟಿಗೆ ಹಿರಿಯರ ಮಾರ್ಗದರ್ಶನದ ಬೆಂಬಲವೆ ಪಕ್ಷದ ಬಲ. ಬೆಳ್ತಂಗಡಿ ತಾಲೂಕಿನ ಕಾರ್ಯಕರ್ತರು ನೀಡಿದ ವಿಶ್ವಾಸದಂತೆ ಶಾಸಕನಾಗಿ ಮೂರು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಹಾಗೂ ಮುಂದಿನ ಕಾರ್ಯಕ್ರಮಗಳಿಗಾಗಿ ಹಿರಿಯರ ಮಾರ್ಗದರ್ಶನ ಬೇಕಾಗಿರುವ ಉದ್ದೇಶದಿಂದ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಪಕ್ಷದ ಬಲವರ್ಧನೆಗಾಗಿ 50 ವರ್ಷಗಳ ಕಾಲ ದುಡಿದು ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಒಂದೆಡೆ, ಕಾರ್ಯಕರ್ತರ ಪ್ರೀತಿಪಾತ್ರರಾಗಿ ಅಭಿವೃದ್ಧಿ ಹರಿಕಾರರಾದ ಹರೀಶ್ ಪೂಂಜ ಅವರ ಕಾಲಾವಧಿಯಲ್ಲಿ ಅಧ್ಯಕ್ಷನಾಗಿ ಇರುವುದು ಸಂತೋಷದ ವಿಚಾರ ಎಂದರು.
ನಮ್ಮೆಲ್ಲರ ಚಿಂತನೆಗಳು ಈ ದೇಶದ ಭವಿಷ್ಯಕ್ಕಾಗಿ ಆದ್ದರಿಂದ ಕುಟುಂಬದ ದೊಡ್ಡ ಹಿನ್ನೆಲೆ ಹೊಂದಿರದ ಸಾಮಾನ್ಯ ಕಾರ್ಯಕರ್ತನಿಗೂ ಇಂದು ಸ್ಥಾನಮಾನ ನೀಡುವ ಪಕ್ಷವೊಂದಿದ್ದರೆ ಅದು ಬಿಜೆಪಿ ಮಾತ್ರ ಎಂದು ಹೇಳಿದ ಅವರು ಪಕ್ಷದ ಬಲವರ್ಧನೆಗೆ ಹಿರಿಯರ ಮಾರ್ಗದರ್ಶನ ಅವಶ್ಯ ಎಂದು ಹೇಳಿದರು.
ಪಕ್ಷದ ಹಿರಿಯ ಕಾರ್ಯಕರ್ತ ಜಯಗೌಡ ಮಾಚಾರು ಕಾರ್ಯಕ್ರಮ ಉದ್ಘಾಟಿಸಿದರು. ಇದಕ್ಕೂ ಮುನ್ನ ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಂಡಲ ಮಾಜಿ ಅಧ್ಯಕ್ಷ, ಹಿರಿಯ ಬಿಜೆಪಿ ಮುಖಂಡ ಕುಶಾಲಪ್ಪ ಗೌಡ ಪೂವಾಜೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿದರು, ಗಣೇಶ್ ಗೌಡ ವಂದಿಸಿದರು.