ಬೆಳ್ತಂಗಡಿ : ತಾಲೂಕಿನಲ್ಲಿ ಅನೇಕ ಸರಕಾರಿ ಕಟ್ಟಡಗಳು ಸ್ವಂತ ಕಟ್ಟಡದಲ್ಲಿದ್ದು ಕೆಲವೊಂದು ಇಲಾಖೆಗಳಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿದೆ. ಇದರಿಂದ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಲು ಸಮಸ್ಯೆಯಾಗುತ್ತಿದ್ದು ಈ ಸಮಸ್ಯೆಗೆ ಪರಿಹಾರವಾಗಿ ತಾಲೂಕಿನ ಸರಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಸೋಮವಾರ ಪದವಿಪೂರ್ವ ಕಾಲೇಜಿನ ಬಳಿ ವಾಣಿಜ್ಯ ತೆರಿಗೆ ಇಲಾಖೆಗೆ ೭೨ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಕಟ್ಟಡವು ಆದಷ್ಟು ಬೇಗ ನಿರ್ಮಾಣಗೊಂಡು ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಎಂದರು.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಕಮಿಷನರ್ ವೀರೇಂದ್ರ ಪಾಟೇಲ್ ಮಾತನಾಡಿ ಕೆಲವು ಜಿಲ್ಲೆಗಳಲ್ಲಿ ಸರಕಾರದಿಂದ ಅನುದಾನಗಳು ಬಿಡುಗಡೆಯಾದರೂ ಕಾಮಗಾರಿ ಪ್ರಾರಂಭವಾಗಲು ಅನೇಕ ತಿಂಗಳುಗಳು ಬೇಕಾಗುತ್ತದೆ. ಆದರೆ ಬೆಳ್ತಂಗಡಿಯಲ್ಲಿ ಶಾಸಕರ ಕಾರ್ಯವೈಖರಿಯಿಂದ ಅನುದಾನ ಬಿಡುಗಡೆಗೊಂಡ ಒಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭವಾಗುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ್ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ನಾಯ್ಕ್, ಸದಸ್ಯರಾದ ಶರತ್, ಅಂಬರೀಶ್, ನಾಮನಿರ್ದೇಶನ ಸದಸ್ಯರಾದ ಪ್ರಕಾಶ್, ಕೇಶವ್, ಲಲಿತಾ, ಮುಖ್ಯಾಧಿಕಾರಿ ಸುಧಾಕರ್, ಲಾಯಿಲ ಗ್ರಾ.ಪಂ ಸದಸ್ಯ ಅರವಿಂದ್, ಸ್ಥಳೀಯರಾದ ಭುಜಂಗ ಶೆಟ್ಟಿ, ಕೃಷ್ಣಪ್ಪ ಭಂಡಾರಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀನ್, ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ ಹಿರಿಯ ಜೆಸಿಐ ನ ಅಧ್ಯಕ್ಷ ಪ್ರಮೋದ್ ಕುಮಾರ್ ವಂದಿಸಿದರು.