ಬೆಳ್ತಂಗಡಿ: ಸಂಬಂಧಿಕರ ಮನೆಗೆ ಬಂದಿದ್ದ ಯುವಕ ನೋರ್ವ ಸ್ನಾನಕ್ಕೆ ನದಿಗೆ ತೆರಳಿದ ವೇಳೆ,ಕಾಲು ಜಾರಿ ನೀರಲ್ಲಿ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಪರಮುಖ ಎಂಬಲ್ಲಿ ನಡೆದಿದೆ.
ಪುತ್ತೂರು ಕಬಕ ನಿವಾಸಿ ಕಿರಣ್ (20) ಮೃತಪಟ್ಟ ಯುವಕ. ಪರಮುಖದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದು ಭಾನುವಾರ ಸಂಜೆ ಇನ್ನೋರ್ವನ ಜತೆ ಸಂಜೆ ಸ್ನಾನಕ್ಕೆಂದು ಮನೆ ಸಮೀಪದ ನೇತ್ರಾವತಿ ನದಿಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ನಾಪತ್ತೆಯಾಗಿದ್ದ.
ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ತಡ ರಾತ್ರಿ ತನಕ ಕಾರ್ಯಾಚರಣೆ ನಡೆಸಿ ಹುಡುಕಾಟ ನಡೆಸಿದರು ಯುವಕ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ಶವ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನದಿಗಳ ನೀರಿನ ಮಟ್ಟ ಇಳಿಯುತ್ತಿದ್ದು, ಹೆಚ್ಚಿನವರು ಮುಂಜಾಗ್ರತೆ ವಹಿಸದೆ ಮೀನುಗಾರಿಕೆ,ಸ್ನಾನ ಇತ್ಯಾದಿಗಾಗಿ ನೀರಿಗೆ ಇಳಿಯುತ್ತಾರೆ. ನದಿಗಳ ಕೆಲವು ಕಡೆ ಹೊಂಡಗಳಲ್ಲಿ ಹೆಚ್ಚಿನ ನೀರು ತುಂಬಿರುತ್ತದೆ.
ಸಾಮಾನ್ಯವಾಗಿ ಇಂತಹ ಪ್ರದೇಶದಲ್ಲಿ ಮೀನುಗಾರಿಕೆ ನಡೆಯುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ನೀರು ಹರಿಯುವ ಕಾರಣ ನದಿಗಳ ಪ್ರದೇಶದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗುತ್ತದೆ. ಕೆಲವೆಡೆ ಅವ್ಯಾಹತ ಮರಳುಗಾರಿಕೆಯಿಂದ ನದಿಗಳ ಪಾತ್ರವೇ ಬದಲಾಗಿದೆ.ಇಂತಹ ಪ್ರದೇಶದಲ್ಲಿ ನೀರಿಗಿಳಿಯುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.