ಬೆಂಗಳೂರು: ಶ್ರೀಕ್ಷೇತ್ರ ಶ್ರೀಶೈಲಂನಲ್ಲಿ ಹೊಸದಾಗಿ ಕರ್ನಾಟಕ ರಾಜ್ಯ ಛತ್ರ ನಿರ್ಮಾಣ ಮಾಡಲು ರೂ. 3 ಕೋಟಿ 24 ಲಕ್ಷಗಳಿಗೆ ಮಂಜೂರಾತಿ ನೀಡಿದ್ದು, ಮೊದಲ ಹಂತದಲ್ಲಿ 1 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಬಸವರಾಜ ಬಿ.ಮತ್ತಿಮುಡ ಅವರ ಪರವಾಗಿ ಪಿ.ರಾಜೀವ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಶ್ರೀಶೈಲಂನ ಕರ್ನಾಟಕ ರಾಜ್ಯ ಛತ್ರದ ಆವರಣದಲ್ಲಿ ಹೊಸದಾಗಿ ಕರ್ನಾಟಕ ಭವನ ನಿರ್ಮಾಣ ಮಾಡುವ ಪ್ರಸ್ತಾವನೆಯು ಸಹ ಸರ್ಕಾರದ ಮುಂದೆಯಿದೆ ಎಂದರು.
ಶ್ರೀಕ್ಷೇತ್ರ ಶ್ರೀಶೈಲಂನಲ್ಲಿರುವ ಕರ್ನಾಟಕ ರಾಜ್ಯ ಛತ್ರದ ನಿವೇಶನದಲ್ಲಿ ಅಂಗಡಿ ಮಳಿಗೆಗಳನ್ನು ಮತ್ತು ವಸತಿ ಗೃಹಗಳನ್ನೊಳಗೊಂಡಂತೆ ಹೊಸದಾಗಿ ಕಟ್ಟಡವನ್ನು ನಿರ್ಮಿಸುವ ಬಗ್ಗೆ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಮುಜರಾಯಿ ಮತ್ತು ಲೋಕೋಪಯೋಗಿ ಸಚಿವರ ನಿರ್ದೇಶದನ್ವಯ ಲೋಕೋಪಯೋಗಿ ಇಲಾಖೆಯಿಂದ ತಯಾರಿಸಲಾಗುತ್ತಿದೆ ಎಂದರು.
ಹಾಲಿ ಇರುವ ಕರ್ನಾಟಕ ರಾಜ್ಯ ಛತ್ರದ ಅಭಿವೃದ್ಧಿ, ದುರಸ್ತಿ, ನವೀಕರಣ ಮಾಡಲು 3 ಕೋಟಿ ರೂ. ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ, ಅನುದಾನವನ್ನು ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆಯನ್ನು ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುತ್ತಿದ್ದು, ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಶ್ರೀಶೈಲಂನಲ್ಲಿ ಪ್ರಸ್ತುತ ಎರಡು ಕರ್ನಾಟಕ ರಾಜ್ಯ ಭವನಗಳಿದ್ದು, ಒಂದು ಕಟ್ಟಡದಲ್ಲಿ 16 ಕೊಠಡಿಗಳು ಹಾಗೂ ಇನ್ನೊಂದು ಕಟ್ಟಡದಲ್ಲಿ 8 ಕೊಠಡಿಗಳು ಮತ್ತು ಭೋಜನ ಶಾಲೆ ಇದೆ. ಕರ್ನಾಟಕ ಭಕ್ತರಿಗೆ ವಸತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಸದನಕ್ಕೆ ಮಾಹಿತಿ ಒದಗಿಸಿದರು.