ಬೆಳ್ತಂಗಡಿ: ಜಿಲ್ಲಾ ಕಂಬಳ ಸಮಿತಿಯು ಮಾ. 5 ರಂದು ಕಂಬಳದ ದಿನಾಂಕವನ್ನು ನಿಗದಿಪಡಿಸಿದ್ದು ಅದೇ ದಿನವೇ ಸೂರ್ಯ- ಚಂದ್ರ ಕಂಬಳ ನಡೆಯಲಿದೆ. ಇದರಲ್ಲಿ ಯಾವುದೇ ಗೊಂದಲ, ಸಂಶಯ ಬೇಡಾ ಎಂದು ವೇಣೂರು-ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಹೆಚ್.ಕೋಟ್ಯಾನ್ ಸ್ಪಷ್ಟಪಡಿಸಿದ್ದಾರೆ.
ಅವರು ಶನಿವಾರ ಇಲ್ಲಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕಳೆದ 28 ವರ್ಷಗಳಿಂದ ಮಾಜಿ ಶಾಸಕ ವಸಂತ ಬಂಗೇರ ಅವರ ಗೌರವಾಧ್ಯಕ್ಷತೆಯಲ್ಲಿ ಅತ್ಯಂತ ವೈಭವವಾಗಿ ಪೆರ್ಮುಡದಲ್ಲಿ ನಡೆದಿದೆ.
ಮಧ್ಯದಲ್ಲಿ ಪ್ರಭಾಕರ ಬಂಗೇರ ಶಾಸಕರಾಗಿದ್ದಾಗ್ಯೂ ಯಾವುದೇ ಅಡೆ ತಡೆ ಬಂದಿರಲಿಲ್ಲ. ಆದರೆ ಈಚೆಗೆ ಕಂಬಳ ನಡೆಯುವುದಿಲ್ಲ ಎಂಬ ಅಪಪ್ರಚಾರ ನಡೆದಿದೆ. ಆದರೆ ನಾವು ಎಲ್ಲಾ ಸಂಘ- ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ಸೌಹಾರ್ದಯುತವಾಗಿ ಮಾ.5 ರಂದು 29 ನೇ ವರ್ಷದ ಕಂಬಳ ನಡೆಸಲು ಬದ್ಧರಾಗಿದ್ದೇವೆ. ಮಾತ್ರವಲ್ಲದೆ ಕಂಬಳ ಕರೆಯ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಡಿ. 19 ರಿಂದ ಕುದಿ ಕಂಬಳಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಳೆದ ಬಾರಿ ಸುಮಾರು 200 ಜತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಈ ಬಾರಿಯೂ ಅಷ್ಟೇ ಸಂಖ್ಯೆಯಲ್ಲಿ ಭಾಗವಹಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಂಬಳವನ್ನು 24 ಗಂಟೆಯ ಅವಧಿಯಲ್ಲಿ ಪೂರ್ಣಗೊಳಿಸುವ ಇರಾದೆಯನ್ನು ಇಟ್ಟುಕೊಂಡಿದ್ದೇವೆ ಎಂದರು.
ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ಮಾತನಾಡಿ, ಬೇರೊಂದು ಸಮಿತಿಯ ರಚನೆಯ ಬಗ್ಗೆ ಮಾಹಿತಿ ಬಂದಿದೆ. ಆದರೆ ಅಸ್ತಿತ್ವದಲ್ಲಿರುವ ಸಮಿತಿಯನ್ನು ಕಡೆಗಣಿಸಿ ಪ್ರತ್ಯೇಕ ಸಮಿತಿ ಮಾಡುವುದು ಸಮಂಜಸವಲ್ಲ. ಅಸ್ತಿತ್ವದಲ್ಲಿರುವ ಸಮಿತಿಯ ವತಿಯಿಂದ ಕಂಬಳ ನಡೆಯದಿದ್ದಲ್ಲಿ ಬೇರೆ ಸಮಿತಿ ಮಾಡುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದರು. ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ ಹೇಡ್ಮೆ, ಕೋಶಾಧಿಕಾರಿ ಅಶೋಕ ಪಾಣೂರು ಇದ್ದರು.