ಬೆಳ್ತಂಗಡಿ : ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಕುಕ್ಕೇಡಿ ಗ್ರಾಮದ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಕಂಬಳವು ಯಾವುದೇ ಕಾರಣಕ್ಕೆ ನಿಂತು ಹೋಗಬಾರದು ಎಂಬ ಕಾರಣಕ್ಕೆ, ಸ್ಥಳೀಯರ ಒತ್ತಾಯದ ಮೇರೆಗೆ ಜಾಗದ ವಿವಾದವನ್ನು ಪರಿಹರಿಸುವ ಮೂಲಕ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಕಂಬಳ ನಿಗದಿತ ದಿನಾಂಕದಂದೇ ಹೊಸ ಸಮಿತಿಯ ಜವಾಬ್ದಾರಿಯಲ್ಲಿ ನಡೆಯಲಿದೆ. ಇದರಲ್ಲಿ ನನ್ನ ವೈಯಕ್ತಿಕ ಪ್ರತಿಷ್ಠೆ ಎಳ್ಳಷ್ಟೂ ಇಲ್ಲಾ ಎಂದು ಶಾಸಕ ಹರೀಶ ಪೂಂಜ ಸ್ಪಷ್ಟಪಡಿಸಿದ್ದಾರೆ.
ಅವರು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕಂಬಳದ ಒಂದು ಕರೆಯು ಸ್ಥಳೀಯರಾದ ಗೋವಿಂದ ಭಟ್ ಎಂಬುವರದ್ದಾಗಿದೆ. ಅವರು ಕಳೆದೆರಡು ವರ್ಷಗಳಿಂದ ಕಂಬಳ ನಡೆಸದಂತೆ ಮನವಿ ಮಾಡುತ್ತಲೇ ಬಂದಿದ್ದಾರೆ. ಕಳೆದ ಬಾರಿಯೇ ಸಮಿತಿಯವರಲ್ಲಿ ಕಂಬಳ ನಡೆಸದಂತೆ ಸೂಚಿಸಿದ್ದರು. ಬೇಲಿ ಹಾಕಲೂ ಮುಂದಾಗಿದ್ದರು.
ಅಲ್ಲದೆ ಪ್ರಸ್ತುತ ಜಾಗವು ನ್ಯಾಯಾಲಯದ ಕಟಕಟೆಯಲ್ಲಿದೆ. ಕಳೆದ ಬಾರಿ ಕಂಬಳ ಸಮಿತಿಯವರ ಮನವಿ ಮೇರೆಗೆ ಅನುಮತಿ ನೀಡಿದ್ದರು. ಈ ಬಗ್ಗೆ ಕಂಬಳದ ಜಿಲ್ಲಾ ಸಮಿತಿಗೂ ಅವರು ದೂರನ್ನು ನೀಡಿದ್ದರು. ಆದರೆ ಈ ಬಾರಿ ಗೋವಿಂದ ಭಟ್ಟರು ಜಾಗ ನೀಡಲು ಒಪ್ಪಿರಲಿಲ್ಲ. ಅಲ್ಲದೆ ಹಳೆ ಸಮಿತಿಯೊಂದಿಗಿನ ಮತ್ತು ಭಟ್ಟರ ನಡುವಿನ ತಿಕ್ಕಾಟದ ಪರಿಣಾಮವೂ ಇದಾಗಿದೆ. ಇದನ್ನರಿತ ಸ್ಥಳೀಯರು ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ ಎಂದರು.
ಕುಕ್ಕೇಡಿ, ನಿಟ್ಟಡೆ, ನಾಲ್ಕೂರು, ಬಳಂಜ, ಕರಿಮಣೇಲು, ಗರ್ಡಾಡಿ ಕಂಬಳ ಪ್ರೇಮಿಗಳು ಕಂಬಳ ನಿಲ್ಲಬಾರದು ಎಂದು ವಿನಂತಿಸಿದ ಕಾರಣ ಕಂಬಳ ನಡೆಸಲು ಅನುವು ಮಾಡಿಕೊಡುವಂತೆ ಭಟ್ಟರೊಂದಿಗೆ ಮಾತುಕತೆ ಮಾಡಿದ್ದು ಅವರು ನೀವು ನಡೆಸುವುದಾದರೆ ಮಾತ್ರ ಜಾಗವನ್ನು ಈ ಒಂದು ವರ್ಷದ ಮಟ್ಟಿಗೆ ಬಿಟ್ಟುಕೊಡುವ ಭರವಸೆ ನೀಡಿದ ಕಾರಣ ಅವರನ್ನು ಸೇರಿಸಿಕೊಂಡೇ ಸಭೆ ನಡೆಸಿದ್ದು ಅಲ್ಲಿ ಸರ್ವಾನುಮತದ ನಿರ್ಣಯದಂತೆ ಅಧ್ಯಕ್ಷ ಸ್ಥಾನವನ್ನು ನನಗೆ ವಹಿಸಿದ್ದಾರೆ.
ಇದರಲ್ಲಿ ನನ್ನ ವೈಯಕ್ತಿಕ ಪ್ರತಿಷ್ಠೆ, ಹಟ ಯಾವುದೂ ಇಲ್ಲಾ. ನನಗೆ ಅಧ್ಯಕ್ಷನಾಗಬೇಕೆಂಬ ಹಂಬಲವೂ ಇಲ್ಲ. ಈಗಲೂ ಗೋವಿಂದ ಭಟ್ಟರು ಕಳೆದ ಸಮಿತಿಗೇ ಅನುಮತಿ ನೀಡಿದಲ್ಲಿ ನಾನು ಹರ್ಷದಿಂದ ಈ ಸಮಿತಿಯಿಂದ ಹಿಂದೆ ಸರಿಯುತ್ತೇನಲ್ಲದೆ, ಈ ಬಗ್ಗೆ ಯಾವುದೇ ಅಭ್ಯಂತರವಿಲ್ಲ ಅಲ್ಲದೆ ಎಲ್ಲಾ ನೆರವು ನೀಡಲಿದ್ದೇನೆ. ಏನಿದ್ದರೂ ಭಟ್ಟರ ನಿರ್ಣಯವೇ ಅಂತಿಮ ಎಂದು ಶಾಸಕರು ಸ್ಪಷ್ಟಪಡಿಸಿದರು.
ನಾನು ಶಾಸಕನಾಗಿರುವುದರಿಂದ ಕಂಬಳದ ಬಗ್ಗೆ ಸಂಪೂರ್ಣ ಗಮನ ಕೊಡಲು ಅಸಾಧ್ಯ. ಹೀಗಾಗಿ ಮಾ.5 ರಂದು ಕಾರ್ಯಾಧ್ಯಕ್ಷ ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷ ಜನಾರ್ಧನ ಪೂಜಾರಿ ಅವರ ನೇತೃತ್ವದಲ್ಲಿ ಕಂಬಳದ ಸಮಸ್ತ ಚಟುವಟಿಕೆಗಳು ನಡೆಯಲಿವೆ.
ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ವಸಂತ ಬಂಗೇರ ಅವರೇ ಇರಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಹಾಗೂ ಪ್ರತಾಪಸಿಂಹ ನಾಯಕ್, ಗೋವಿಂದ ಭಟ್ ಭೂತೇರು ಕೂಡ ಗೌರವಾಧ್ಯಕ್ಷ ಸ್ಥಾನದಲ್ಲಿರುತ್ತಾರೆ. ಪ್ರಧಾನ ಕಾರ್ಯದಶಿಯಾಗಿ ಕಾರ್ತಿಕ್ ಅಮೈ, ಕೋಶಾಧಿಕಾರಿಯಾಗಿ ಸೋಮನಾಥ್ ಕೆ.ವಿ ಮತ್ತು ಸ್ಥಳೀಯರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದ್ದು ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದರು.
ನನಗೆ ಕಂಬಳ ಕ್ರೀಡೆ ಬಹಳ ಆಸಕ್ತಿಯ ಕ್ರೀಡೆಯಾಗಿದ್ದು ಮತ್ತು ತುಳುನಾಡ ಕಂಬಳ ಕ್ರೀಡೆಯನ್ನು ಉಳಿಸಲು ಅತ್ಯಾಧುನಿಕ ಕಂಬಳ ಕ್ರೀಡಾಂಗಣ ನಿರ್ಮಿಸಲು ಯೋಜನೆ ಸಿದ್ಧಪಡಿಸುತ್ತಿದ್ದೇನೆ. ಇದಕ್ಕಾಗಿ ಪ್ರತ್ಯೇಕ ಸ್ಥಳವನ್ನು ಮಂಜೂರುಗೊಳಿಸಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗುವುದಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕಂಬಳವನ್ನು ಬೆಳೆಸುವುದೇ ನನ್ನ ಗುರಿಯಾಗಿದೆ ಎಂದರು.
ಗೋಷ್ಠಿಯಲ್ಲಿ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜನಾರ್ಧನ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಅಮೈ, ಗೌರವ ಸಲಹೆಗಾರ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು