ಬೆಳ್ತಂಗಡಿ: ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್ ವ್ಯಾಪ್ತಿಯ ಮುಂಡಾಜೆ ಗ್ರಾಮದ ಕಡಂಬಳ್ಳಿಯ ಅರಳಿಕಟ್ಟೆ ಎಂಬಲ್ಲಿ, ಭಾನುವಾರ ಮಳೆಯೊಂದಿಗೆ ಬೀಸಿದ ಗಾಳಿಗೆ ಮರವೊಂದು ಎಚ್.ಟಿ.ವಿದ್ಯುತ್ ಲೈನ್ ಮೇಲೆ ಉರುಳಿ ಪರಿಸರದ ಕಾಯರ್ತೋಡಿ, ಕೊಡಂಗೆ, ಕಲ್ಲಾರ್ಯ ಕುಡೆಂಚಿ,ಮೂಲಾರು ಕಡಂಬಳ್ಳಿ ಮೊದಲಾದ ಕಡೆಯ ಸುಮಾರು 200ರಷ್ಟು ಗ್ರಾಹಕರಿಗೆ ಸೋಮವಾರ ಸಂಜೆ ತನಕ ವಿದ್ಯುತ್ ಪೂರೈಕೆ ಇರಲಿಲ್ಲ. ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿ ಮರ ತೆರವುಗೊಳಿಸಲು ಸಹಕರಿಸಿದರು.
ಕಕ್ಕಿಂಜೆ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಸದಾ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಈ ವಾರ ಆರಂಭವಾಗಲಿದ್ದು ವಿದ್ಯುತ್ ಕಡಿತವಾಗುತ್ತಿರುವುದು ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಡಕಾಗಿದೆ.
ಮುಂಡಾಜೆಯ ಕಾಯರ್ತೋಡಿ,ಮೂಲಾರು,ಕುಡೆಂಚಿ ಮೊದಲಾದ ಪರಿಸರಗಳಲ್ಲಿ ಸಂಜೆ ವೇಳೆ ಮಳೆ ಉಂಟಾದರೆ ಆ ವೇಳೆ ಮಾಯವಾಗುವ ವಿದ್ಯುತ್ ಮರುದಿನ ಒಮ್ಮೆ ಪ್ರತ್ಯಕ್ಷವಾಗಿ ಮತ್ತೆ ಕೈ ಕೊಡುತ್ತಿರುವುದು ಮಾಮೂಲಾಗಿದೆ.