ಬೆಳ್ತಂಗಡಿ; ರಾಜ್ಯದಲ್ಲಿ ಸದ್ಯ ವಿದ್ಯುತ್ ದರವನ್ನು ಏರಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ. ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮತಿ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ದರ ಏರಿಕೆ ಕುರಿತು ಯೋಚಿಸಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.
ಅವರು ಭಾನುವಾರ ಉಜಿರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಸರಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳ ಟೀಕೆಯನ್ನು ಮಾಡಲು ಸಾಧ್ಯವಾಗದ ಕಾಂಗ್ರೆಸ್ ಸಮಾಜವನ್ನು ಒಡೆಯುವ ಯತ್ನ ಮಾಡುತ್ತಿದೆ, ಬೊಮ್ಮಾಯಿ ಮುಖ್ಯಮಂತ್ರಿಗಳಾದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ಸಿಕ್ಕಿದೆ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3500 ಕೋಟಿ ರೂ. ಅನುದಾನ, ನಗರಾಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ ಅಭಿವೃದ್ಧಿ ಬಗ್ಗೆ ಮಾತನಾಡಲು ಸಾಧ್ಯವಿಲ್ಲವಾದಾಗ ಕಾಂಗ್ರೆಸ್ ಕುತಂತ್ರಗಳನ್ನು ಮಾಡುತ್ತಿದೆ ಎಂದರು.
ಕಾಂಗ್ರೆಸ್ ಕಮ್ಯುನಿಸ್ಟ್ ಷಡ್ಯಂತ್ರಕ್ಕೆ ಬಲಿಯಾಗಬೇಡಿ:
ಕೇರಳದ ಕಮ್ಯೂನಿಷ್ಟ್ ಸರಕಾರ ಶಂಕರಾಚಾರ್ಯ, ಜಟಾಯು, ನಾರಾಯಣಗುರುಗಳ ಸ್ತಬ್ಧಚಿತ್ರಗಳನ್ನು ಕಳುಹಿಸಿಕೊಡುವ ಮೂಲಕ ನಿಯಮಾವಳಿಗಳನ್ನು ಉಲ್ಲಂಘಿಸಿದೆ.
ಉದ್ದೇಶ ಪೂರ್ವಕವಾಗಿ ವಿವಾದಗಳನ್ನು ಸೃಷ್ಟಿಸುವ ಕಾರ್ಯ ಸರಕಾರದಿಂದ ನಡೆದಿದೆ. ಕಾಂಗ್ರೆಸ್ ಪಕ್ಷವು ಕಮ್ಯೂನಿಸ್ಟ್ ಮಾಡಿರುವುದನ್ನು ಎತ್ತಿ ಹಿಡಿಯುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಬಿಜೆಪಿ ಆಡಳಿತದ ಮಹಾನಗರಪಾಲಿಕೆ ನಾರಾಯಣಗುರು ವೃತ್ತ ಎಂದು ಹೆಸರಿಡುವ ಕುರಿತು ನಿರ್ಣಯ ಕೈಗೊಂಡಾಗ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಈಗ ನಾರಾಯಣ ಗುರುಗಳ ಬಗ್ಗೆ ತೋರುವ ಕಾಳಜಿ ರಾಜಕೀಯ ತಂತ್ರವಾಗಿದೆ ಎಂದು ಹೇಳಿದರು.
ಜನವರಿ 26ರಂದು ಕೆಲ ಸಂಘಟನೆಗಳು ನಡೆಸುವ ಕಾರ್ಯಕ್ರಮಗಳಿಗೆ ಯಾವುದೇ ವಿರೋಧವಿಲ್ಲ ಆದರೆ ಅದು ರಾಜಕೀಯ ಪ್ರೇರಿತವಾಗಿರದೆ ನಾರಾಯಣ ಗುರುಗಳಮೇಲಿನ ಪ್ರೀತಿಯಿಂದ ನಡೆಯಬೇಕು ಎಂದರು.
ಅರಣ್ಯ ಇಲಾಖೆಯ ಸಮಸ್ಯೆ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ಕೂಡಲೇ ಗಮನಕ್ಕೆ ತರುವಂತೆ ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ,ಪ್ರತಾಪಸಿಂಹ ನಾಯಕ್ ಇದ್ದರು