ಪುತ್ತೂರು : ಆರೋಗ್ಯ ರಕ್ಷಣೆಯ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಆದ್ಯತಾ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಮುಂದಿನ 3 ವರ್ಷಗಳ ಅವಧಿಯಲ್ಲಿ ರಾಜ್ಯದ ಎಲ್ಲಾ 2,500 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ತುರ್ತು ಕಾರ್ಯನಿಮಿತ್ತ ಆರೋಗ್ಯ ಸಚಿವರು ಸ್ವತಃ ಹಾಜರಾಗಲು ಅಸಾಧ್ಯವಾಗಿತ್ತು. ಕೊರೋನಾ 2ನೇ ಅಲೆಯ ಸಂದರ್ಭ ಉಂಟಾದ ಆಕ್ಸಿಜನ್ ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು ಹಾಕಿಕೊಟ್ಟಮಾರ್ಗಸೂಚಿಯಂತೆ ರಾಜ್ಯದಲ್ಲಿ ಈಗ 250ಕ್ಕೂ ಹೆಚ್ಚು ಆಮ್ಲಜನಕ ಉತ್ಪಾದನಾ ಘಟಕಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಇವೆ. ಈ ಪೈಕಿ ಶೇ.50ರಷ್ಟು ಘಟಕಗಳು ಖಾಸಗಿಯವರ ನೆರವಿನಿಂದ ನಿರ್ಮಾಣವಾಗಿವೆ. ರಾಜ್ಯದಲ್ಲಿ ಈಗ 13,588 ಆಕ್ಸಿಜನ್ ಸಿಲಿಂಡರ್ಗಳಿವೆ. ಆಕ್ಸಿಜನ್ ಉತ್ಪಾದನೆಯ ಪ್ರಮಾಣ 1,700 ಮೆಟ್ರಿಕ್ ಟನ್ಗೆ ತಲುಪಿದೆ. ಇದೀಗ ಆಕ್ಸಿಜನ್ ಕುರಿತಂತೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗಿದೆ ಎಂದರು.