ಮಂಗಳೂರು : ಸುರತ್ಕಲ್ (NITK) ಸಮೀಪ ಇರುವ ಅನಧಿಕೃತ ಟೋಲ್ ಕೇಂದ್ರವನ್ನು ತೆರವುಗೊಳಿಸಲು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಾರ್ಚ್ 15ರಂದು ನಡೆಯುವ ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಗೇಟ್ ವರೆಗಿನ ಬೃಹತ್ ಪಾದಯಾತ್ರೆಗೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ.
ಸುರತ್ಕಲ್ ಟೋಲ್ ಕೇಂದ್ರ ಪ್ರಾರಂಭವಾದ ದಿನದಿಂದಲೇ ಜನಸಾಮಾನ್ಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಾತ್ರವಲ್ಲ ಕಳೆದ ಕೆಲವು ವರುಷಗಳಿಂದ ಸುರತ್ಕಲ್ ಅಕ್ರಮ ಟೋಲ್ ಸಂಗ್ರದ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆದಿದೆ. \
ಇಷ್ಟೆಲ್ಲಾ ವಿರೋಧಗಳ ನಡುವೆಯೂ ಸರಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಸುರತ್ಕಲ್ ನ ಅಕ್ರಮ ಟೋಲ್ ಗೇಟನ್ನು ಮುಚ್ಚುವ ಬದಲು ಸುಂಕ ಸಂಗ್ರಹದ ಹೆಸರಿನಲ್ಲಿ ವಾಹನ ಸವಾರರ ಸುಲಿಗೆ ನಡೆಸಲು ಅವಕಾಶವನ್ನು ನೀಡುತ್ತಾ ಬಂದಿದೆ.
ಟೋಲ್ ಕೇಂದ್ರದ ತೆರವಿಗೆ ನಿರಂತರ ಹೋರಾಟ ನಡೆದ ಹಿನ್ನಲೆಯಲ್ಲಿ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲರು ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚುತ್ತೇವೆ ಅಥವಾ ಹೆಜಮಾಡಿ ಟೋಲ್ ಕೇಂದ್ರದ ಜೊತೆ ವಿಲೀನಗೊಳಿಸುವಂತಹ ಸುಳ್ಳು ಪತ್ರಿಕಾ ಹೇಳಿಕೆಗಳನ್ನು ಹಾಗು ಕೇಂದ್ರದ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೊತೆ ಹಲವಾರು ಬಾರಿ ಮಾತುಕತೆ ನಡೆಸಿದ್ದೇನೆಂದು ಭರವಸೆಗಳನ್ನು ನೀಡುವ ಮೂಲಕ ಜನರ ಆಕ್ರೋಶವನ್ನು ಮತ್ತು ಟೋಲ್ ಗೇಟ್ ವಿರುದ್ಧದ ಹೋರಾಟವನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುವ ಕೆಲಸವನ್ನು ಮಾಡುತ್ತಾ ಬಂದಿರುತ್ತಾರೆ.
ಈಗಾಗಲೇ ಸಂಸದರು ನೀಡಿದ ಹೇಳಿಕೆಗಳಿಂದ ಹಾಗೂ ದಾರಿ ತಪ್ಪಿಸುವ ಭರವಸೆಗಳಿಂದ ಜಿಲ್ಲೆಯ ಜನ ಸಂಸದರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ದಿನನಿತ್ಯ ವಾಹನ ಸವಾರರಿಂದ ನಿರಂತರವಾಗಿ ತೆರಿಗೆ ಹೆಸರಲ್ಲಿ ಸುಲಿಗೆ ನಡೆಸುತ್ತಿರುವ ಅಕ್ರಮ ಸುರತ್ಕಲ್ ಟೋಲ್ ಕೇಂದ್ರವನ್ನು ಶಾಶ್ವತವಾಗಿ ಮುಚ್ಚಲು ಒತ್ತಾಯಿಸಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಮಾರ್ಚ್ 15 ರಂದು ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್ ಗೇಟ್ ವರೆಗೆ ನಡೆಯುವ ಬೃಹತ್ ಪಾದಯಾತ್ರೆಗೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಬೆಂಬಲವನ್ನು ವ್ಯಕ್ತಪಡಿಸುತ್ತದೆ.
ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭಾಗವಹಿಸುವಂತೆ ವಿನಂತಿಸಿಕೊಳ್ಳುತ್ತದೆ. ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.