ಬಂಟ್ವಾಳ: ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಬಳಿಕ ದೇಶ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿದ್ದು, ದೇಶದ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾ ಆತ್ಮನಿರ್ಭರರಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಆಜಾದಿ ಕಾ ಸುವರ್ಣ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಕೃತ,ಖಾಸಗಿ,ಸ್ಥಳೀಯ ಬ್ಯಾಂಕ್ ಗಳು,ನಬಾಡ್೯ ಮತ್ತು ಇತರೆ ಸಹಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬಂಟವಾಳದ ಬಂಟರ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸಾಲಸಂಪರ್ಕ ಕಾರ್ಯ ಕ್ರಮ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಸರ್ಕಾರಗಳು ನಾಗರೀಕರ ಅವಶ್ಯಕತೆಗಳನ್ನು ಗುರುತಿಸುವಲ್ಲಿ, ಜನರ ಸಹಭಾಗಿತ್ವ ಪಡೆಯುವಲ್ಲಿ ವಿಫಲವಾದ್ದರಿಂದ ಬ್ಯಾಂಕಿಂಗ್ ಕ್ಷೇತ್ರ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ ಅಲ್ಲದೆ ಕಾಂಗ್ರೆಸ್ ನವರು ಜಾತಿ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ದಲಿತರನ್ನು ಮುಖ್ಯವಾಹಿನಿಗೆ ಬರಲು ಅವಕಾಶ ನೀಡಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಾಜದಲ್ಲಿ ಯೋಜನೆಗಳಿಂದ ವಂಚಿತರಾದವರಿಗೆ ಯಾವುದೇ ತಾರತಮ್ಯ ಮಾಡದೆ ನೆರವು ನೀಡಿದೆ ಎಂದರು. ದೇಶದಲ್ಲಿ 12 ಕೋಟಿ ಮನೆಗಳಿಗೆ ಶೌಚಾಲಯ ಒದಗಿಸಲಾಗಿದ್ದರೆ,ಸುಮಾರು 16 ಕೋಟಿ ರೈತರು ಯೋಜನೆಗಳ ಲಾಭ ಪಡೆದಿದ್ದಾರೆ ಎಂದ ಸಚಿವರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 195606 ಮಂದಿ ಮುದ್ರಾಯೋಜನೆ ಲಾಭ ಪಡೆದಿದ್ದು. ಬೀದಿ ವ್ಯಾಪಾರಿಗಳ ಸಹಿತ ಹಲವರಿಗೆ ಸಾಲ, ಸೌಲಭ್ಯಗಳು ದೊರಕಿವೆ. ಇದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಶ್ರಮದಿಂದ ಸಾಧ್ಯವಾಗಿದೆ ಎಂದರು.
ಅಭಿವೃದ್ಧಿ ಕೇವಲ ಮೂಲಭೂತ ಸೌಕರ್ಯಗಳಿಂದ ಮಾತ್ರ ಸಾಧ್ಯವಿಲ್ಲ, ಜೊತೆಗೆ ಶಿಕ್ಷಣದ ಏಳಿಗೆ, ಆರ್ಥಿಕ ಏಳಿಗೆ ಮತ್ತು ಸಾಮಾಜಿಕ ಏಳಿಗೆಯೂ ಅಗತ್ಯವಾದುದು, ಆಗ ಮಾತ್ರ ನೈಜ ಅಭಿವೃದ್ಧಿ ಸಾಧ್ಯ, ಇದು ದೂರದೃಷ್ಟಿಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಕಾರ್ಯರೂಪಕ್ಕೆ ಬರುತ್ತಿದೆ ಎಂದರು.
ತುಳು,ಕನ್ನಡ ಬಲ್ಲವರು ಕಡ್ಡಾಯವಿರಬೇಕು:
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಾಲಮೇಳ ಮೂಲಕ ಈ ಜಿಲ್ಲೆಯ ಜನರು ಬ್ಯಾಂಕಿಗೆ ಹೋಗಿ ಸಾಲ ಪಡೆಯಬಹುದು ಎಂದು ನಿರೂಪಿಸಿದವರು ಜನಾರ್ದನ ಪೂಜಾರಿ. ಡಿಜಿಟಲ್ ಇಂಡಿಯಾ, ಜನಧನ್ ಅಕೌಂಟ್ ಮೂಲಕ ನೇರವಾಗಿ ಫಲಾನುಭವಿಗೆ ದೊರಕುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದರು ಎಂದರು.
ದ. ಕ. ಜಿಲ್ಲೆಯಲ್ಲಿ 4 ಲಕ್ಷ ಜನರಲ್ಲಿ ಜನ್ ಧನ್ ಅಕೌಂಟ್ ಆಗಿದೆ ಎಂದು ಮಾಹಿತಿ ನೀಡಿದ ಅವರು, ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲೂ ಮಾಡಲಾಗುತ್ತಿದೆ. ಹೀಗಾಗಿ ಸ್ಥಳೀಯ ಭಾಷೆ ಬಲ್ಲವರು ಪ್ರತಿಯೊಂದು ಬ್ರಾಂಚ್ ನಲ್ಲಿರುವಂತಾಗಬೇಕು.
ಕನ್ನಡ ಮತ್ತು ತುಳು ಮಾತನಾಡುವವರು ಕಡ್ಡಾಯವಾಗಿ ಒಂದೊಂದು ಬ್ಯಾಂಕ್ ಶಾಖೆ ಯಲ್ಲಿರಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಸೂಚಿಸಿದರು. ಸರಕಾರದ ಯೋಜನೆಯ ಬಗ್ಗೆ ಬ್ಯಾಂಕಿನಲ್ಲಿರುವ ಸಿಬ್ಬಂದಿಗಳಿಗೆ ಮಾಹಿತಿ ಕೊರತೆ ಕೆಲ ಶಾಖೆಗಳಲ್ಲಿದೆ. ಈ ನಿಟ್ಟಿನಲ್ಲಿ ಸರಿಯಾದ ನಿರ್ದೇಶನಗಳನ್ನು ಅವರಿಗೆ ನೀಡಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ದೊರಕಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ನಳಿನ್ ಹೇಳಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ಶಿಕ್ಷಣ ಆರೋಗ್ಯ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದೆ. ಜನಸಾಮಾನ್ಯರಿಗೆ ಅನುಕೂಲವಾಗಿಸಲು ಜನಾರ್ಧನ ಪೂಜಾರಿವರು ಸಾಲ ಮೇಳ ನಡೆಸಿದ್ದರು. ಇದೀಗ ಹೊಸ ಬಗೆಯಲ್ಲಿ ಸಾಲಸಂಪರ್ಕ ಕಾರ್ಯಕ್ರಮ ಆಯೋಜಿಸುವ ಮೂಲಕ ನಳಿನ್ ಕುಮಾರ್ ಕಟೀಲು ಅವರು ಆಧುನಿಕ ಸಾಲ ಮೇಳದ ರುವಾರಿ ಎನ್ನಿಸಿದ್ದಾರೆ ಎಂದರು.
ಪ್ರಧಾನಿ ಮಂತ್ರಿ ಅವಾಜ್ ಯೋಜನೆಯಡಿ ಸಾಲ ಮಂಜೂರಾತಿ ಪತ್ರ, ಸ್ಟ್ಯಾಂಡಪ್ ಇಂಡಿಯಾ ಯೋಜನೆಯಡಿ ಸಹಿತ ವಿವಿಧ ಯೋಜನೆಯಡಿ ಸಾಲ ಮಂಜೂರಾತಿಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಡಾ.ಶಿವಪ್ರಕಾಶ್,ಐರಿನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಜಾರಿಗೆ ತರಲಾದ ಮೊಬೈಲ್ ಬ್ಯಾಂಕ್ ನ ಬಸ್ ಗೆ ಕೇಂದ್ರ ಸಚಿವರಾದ ಭಗವಂತ ಖೂಬ ಅವರು ಉದ್ಘಾಟಿಸಿ ಚಾಲನೆ ನೀಡಿ ಶುಭಹಾರೈಸಿದರು.ಸಂಸದ ನಳಿನ್ ಕುಮಾರ್ ಕಟೀಲ್,ಎಸ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ಕುಮಾರ್,ಶಾಸಕರಾದ ರಾಜೇಶ್ ನಾಯ್ಕ್,ವೇದವ್ಯಾಸ ಕಾಮತ್,ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕುಮಾರ್,ಜಿಪಂ ಸಿಇಒ ಡಾ.ಕುಮಾರ,ಸ್ಕ್ಯಾಡ್ಸ ಅಧ್ಯಕ್ಷ ರವೀಂದ್ರ ಕಂಬಳಿ, ನಿಗಮದ ಅಧ್ಯಕ್ಷರುಗಳಾದ ಸಂತೋಷದ ಕುಮಾರ್ ರೈ, ರವೀಂದ್ರ ಶೆಟ್ಟಿ ಮೊದಲಾದವರಿದ್ದರು.