ಬಂಟ್ವಾಳ : ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ-ಮಾಲಕರ ಸಂಘ ಬಂಟ್ವಾಳ ಇದರ 38 ನೇ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಸಭಾಧ್ಯಕ್ಷತೆ ವಹಿಸಿದ್ದರು. ಬಿ.ಸಿ.ರೋಡಿನಿಂದ ಕೆಲ ಆಟೋರಿಕ್ಷಾಗಳು ಸುಬ್ರಹ್ಮಣ್ಯ, ಧರ್ಮಸ್ಥಳ,ಕಟೀಲು,ಮೂಡಬಿದ್ರೆ,ಮಂಗಳೂ ರು ವಿಮಾನ ನಿಲ್ದಾಣ,ರೈಲು ನಿಲ್ದಾಣಗಳಿಗೆ ಬಾಡಿಗೆ ಮಾಡುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತಲ್ಲದೆ ಅನಧಿಕೃತವಾಗಿ ಬಾಡಿಗೆ ಮಾಡುವಂತ ಈ ಆಟೋರಿಕ್ಷಾಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಭೆ ನಿರ್ಣಯಿಸಿತಲ್ಲದೆ ಪದೇಪದೇ ಇಂಧನ ದರ ಹೆಚ್ಚಿಸುವ ಕೇಂದ್ರ ಸರಕಾರದ ನೀತಿಯನ್ನು ಸಭೆ ಖಂಡಿಸಿತು.
ಸಭೆಯಲ್ಲಿ 2021-22 ರ ಸಾಲಿಗೆ 19 ಮಂದಿ ಸದಸ್ಯರನ್ನೊಳಗೊಂಡು ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಬಿ.ಎಂ. ಪ್ರಭಾಕರ ದೈವಗುಡ್ಡೆ ಅವರು ಪುನರಾಯ್ಕೆಯಾದರು. ಉಳಿದಂತೆ ಬಿ.ಸುರೇಶ್ ಬಂಗೇರ ಸಂಚಯಗಿರಿ,ಸದಾನಂದ ನಾವೂರ,ಪುರುಷೋತ್ತಮ ಬಂಗೇರ ನಾಟಿ ಉಪಾಧ್ಯಕ್ಷರು,ವಿನ್ಸೆಂಟ್ ರೊಡ್ರಿಗಸ್ ಪರ್ಲಿಯಾ ಪ್ರಧಾನ ಕಾರ್ಯದರ್ಶಿ,ನಮೇಶ್ ಶೆಟ್ಟಿ ಕೂರಿಯಾಳ ಜತೆ ಕಾರ್ಯದರ್ಶಿ,ರಾಘವೇಂದ್ರ ರಾವ್ ಕೋಶಾಧಿಕಾರಿಯಾಗಿ ಆಯ್ಕೆಯಾದರು.ಸುರೇಶ್ ಬಂಗೇರ ಸ್ವಾಗತಿಸಿ,ವಿನ್ಸೆಂಟ್ ರೋಡ್ರಿಗಸ್ ವಂದಿಸಿದರು.