ಬೆಳ್ತಂಗಡಿ: ಮೀನುಗಾರ ಮೊಗೇರರರು ಮತ್ತು ಇತರ ಜಾತಿಗಳು ಸುಳ್ಳು ದಾಖಲೆ ಸೃಷ್ಟಿಸಿ ಪ.ಜಾತಿಯ ಪ್ರಮಾಣಪತ್ರ ಪಡೆದು ಪರಿಶಿಷ್ಟ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುತ್ತಿದ್ದು ಇದರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಬೆಳ್ತಂಗಡಿ ತಾಲೂಕು ಮೊಗೇರ ಸಮನ್ವಯ ಸಮಿತಿ ಅಧ್ಯಕ್ಷ ಎಚ್.ಬಿ. ಮೋಹನ್ ಮಾಚಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರವಾರ ಜಿಲ್ಲೆಯ ಹಿಂದುಳಿದ ಪ್ರವರ್ಗ ೧ರಲ್ಲಿ ಬರುವ ಮೀನುಗಾರ ಮೊಗೇರ ಜಾತಿಯ ಜನ ಸುಳ್ಳು ದಾಖಲೆ ಸೃಷ್ಟಿಸಿ ಶಾಲೆ ದಾಖಲೆಗಳನ್ನು ತಿದ್ದುಪಡಿ ಮಾಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ನೈಜ ಪರಿಶಿಷ್ಟರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಿದ್ದಾರೆ.
ದ.ಕ. ಜಿಲ್ಲೆ, ಉಡುಪಿ ಮತ್ತು ಗಡಿನಾಡು ಭಾಗದಲ್ಲಿ ವಾಸಮಾಡುವ ಪ.ಜಾತಿಯಲ್ಲಿ ಬರುವ ಮೊಗೇರ ಜಾತಿಯ ಸಾಂವಿಧಾನಿಕ ಮೀಸಲಾತಿಯನ್ನು ಕಬಳಿಸಲು ನಡೆಸಿರುವ ಹುನ್ನಾರ ಮತ್ತು ಇತರ ಜಾತಿಯವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳುತ್ತಿರುವ ಪ್ರಕರಣದ ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಮೊಗೇರ ಸಂಘ ಮತ್ತು ದಲಿತ ಸಂಘಟನೆಗಳು ತೀರ್ಮಾನಿಸಿದೆ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ಮತ್ತು ಇತರ ಜಾತಿಗಳು ೧೯೭೭ ರಿಂದ ಇಲ್ಲಿಯವರೆಗೆ ಸುಳ್ಳು ದಾಖಲೆ ಪತ್ರ ನೀಡಿ ಮೋಸದಿಂದ ಪಡಕೊಂಡಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ಸಮಗ್ರವಾಗಿ ರದ್ದುಪಡಿಸಿ ಅವರನ್ನು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ೧೯೮೯ರಡಿಯಲ್ಲಿ ಕಾನೂನು ಪ್ರಕಾರ ಅವರು ಪಡಕೊಂಡ ಎಲ ಸವಲತ್ತುಗಳನ್ನು ಸರಕಾರ ವಾಪಾಸು ಪಡೆದು ಅವರನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.
ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ ಮಾತನಾಡಿ, ಮೇ ೧೦ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸರಿಯಾಗಿ ಜಿಲ್ಲೆಯ ಪ್ರತಿ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರಕಾರ ಮತ್ತು ರಾಜ್ಯಪಾಲರಿಗೆ ಹಕ್ಕೊತ್ತಾಯ ಸಲ್ಲಿಸುವುದು. ಮೇ ೨೩ರಂದು ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಸಹಸ್ರಾರು ದಲಿತರು ಪ್ರತಿಭಟನಾ ರಾಲಿ ನಡೆಸಿ ಸರಕಾರದ ಸಚಿವರುಗಳು, ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರಿಗೆ ಮನವಿ ಸಲ್ಲಿಸುವ ಮೂಲಕ ಒಕ್ಕೊರಲಿನಿಂದ ಆಗ್ರಹಿಸಿ ಪ್ರತಿಭಟಿಸಲಿದ್ದಾರೆ.
ಸಂವಿಧಾನ ಪರ ನ್ಯಾಯ ಪರ ಹೋರಾಟದಲ್ಲಿ ಜಿಲ್ಲೆಯ ಸಮಸ್ತ ಪರಿಶಿಷ್ಠ ಸಮುದಾಯದ ಎಲ್ಲ ಬಂಧುಗಳು ಸ್ವಯಂ ಪ್ರೇರಿತವಾಗಿ ಈ ಹೋರಾಟದಲ್ಲಿ ‘ಭಾಗವಹಿಸಬೇಕೆಂದು ಮುಖಂಡರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಕೋಶಾಧಿಕಾರಿ ಸಿ.ಕೆ.ಚಂದ್ರಕಲಾ, ಕಾರ್ಯದರ್ಶಿ ಕೊರಗಪ್ಪ ಅಳದಂಗಡಿ, ಸಂಘಟನಾ ಕಾರ್ಯದರ್ಶಿ ಸುಂದರ ಎ.ಇಂದಬೆಟ್ಟು ಉಪಸ್ಥಿತರಿದ್ದರು.