ಉಪ್ಪಿನಂಗಡಿ : ಉಪ್ಪಿನಂಗಡಿ ಹಳೆ ಗೇಟ್ ಬಳಿ ಹಿಂದೂ ಕಾರ್ಯಕರ್ತನ ಮೇಲೆ ನಡೆದ ತಲ್ವಾರ್ ದಾಳಿಗೆ ಸಂಬಂಧಿಸಿ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಡಿ.14 ರ ರಾತ್ರಿ ಉಪ್ಪಿನಂಗಡಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪಿಎಫ್ ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿ ಚದುರಿಸಿದ್ದಾರೆ.
ಘಟನೆಯಲ್ಲಿ ಕೆಲವು ಪೊಲೀಸರು ಹಾಗೂ ಹಲವು ಪಿಎಫ್ ಐ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಠಾಣೆಗೆ ಮುತ್ತಿಗೆ ಹಾಕಿದ ವೇಳೆ ಬಂಟ್ವಾಳ ಎಸ್ ಐ ಪ್ರಸನ್ನ ಅವರಿಗೆ ಚೂರಿ ಇರಿಯಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಉಪ್ಪಿನಂಗಡಿಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಅಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಸದ್ಯ ಸುಮಾರು ಐದು ಸಾವಿರದಷ್ಟು ಪೊಲೀಸರು ಉಪ್ಪಿನಂಗಡಿಯತ್ತ ಧಾವಿಸಿ ಬರುತ್ತಿದ್ದಾರೆಂದು ಬಂಟ್ವಾಳ ಠಾಣಾ ಇನ್ಸ್ ಪೆಕ್ಟರ್ ನಾಗರಾಜ್ ಡಿ ಎನ್ ಹೇಳುತ್ತಿರುವ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾರಗಳ ಹಿಂದೆ ಉಪ್ಪಿನಂಗಡಿಯ ಹಳೇ ಗೇಟ್ ಬಳಿ ಹಿಂದೂ ಕಾರ್ಯಕರ್ತರು ನಡೆಸುತ್ತಿದ್ದ ಹಸಿ ಮೀನಿನ ಅಂಗಡಿಗೆ ದುಷ್ಕರ್ಮಿಗಳ ತಂಡವೊಂದು ದಾಳಿ ಮಾಡಿ ಮೂವರನ್ನು ಗಾಯಗೊಳಿಸಿತ್ತು.
ಈ ಪ್ರಕರಣದ ತನಿಖೆಗಾಗಿ ಇಂದು ಬೆಳಿಗ್ಗೆ ಮೂವರು ಪಿಎಫ್ ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು . ಈ ಮೂವರು ಅಮಾಯಕರು ಇವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪಿಎಪ್ ಐ ಇಂದು ಬೆಳಿಗ್ಗೆಯಿಂದಲೇ ಠಾಣೆ ಮುಂಬಾಗ ರಥ ಬೀದಿ ಬಂದ್ ಮಾಡಿ ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿತ್ತು. ದಿನವಿಡೀ ನಡೆದ ಪ್ರತಿಭಟನೆಯ ಬಳಿಕ ಒರ್ವ ಮುಖಂಡನನ್ನು ಪೊಲೀಸರು ಬಿಡುಗಡೆಗೊಳಿಸಿದ್ದರು. ಉಳಿದ ಇಬ್ಬರ ಬಿಡುಗಡೆಗೆ ಅಗ್ರಹಿಸಿ ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ಪಿಎಪ್ಐ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದಾಗ , ಪ್ರತಿಭಟನೆ ಕೈ ಮೀರುವುದನ್ನು ಗಮನಿಸಿದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.