ಮಂಗಳೂರಿನಲ್ಲಿ ಕಾರ್ಪೋರೇಟ್ ಪರ 4 ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ, ಬೆಲೆಯೇರಿಕೆ ನಿಯಂತ್ರಣ ಕ್ಕಾಗಿ, ಸಂವಿಧಾನದ ಪ್ರಜಾಪ್ರಭುತ್ವ ಮೌಲ್ಯಗಳ ಉಳಿವಿಗಾಗಿ, ರೂ. 24,000 ಸಮಾನ ಕನಿಷ್ಠ ವೇತನಕ್ಕಾಗಿ, ಸಾರ್ವಜನಿಕ ಉದ್ದಿಮೆಗಳ ರಕ್ಷಣೆಗಾಗಿ ಮುಂತಾದ ಹಲವು ಬೇಡಿಕೆಗಳನ್ನು ಮುಂದಿಟ್ಟು, ಭಾರತ ಉಳಿಸಿ, ಜನತೆಯನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ಮಾರ್ಚ್ 28-29ರಂದು ಎರಡು ದಿನಗಳ ಕಾಲ ಅಖಿಲ ಭಾರತ ಮಹಾಮುಷ್ಕರ ಜರುಗಲಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ (JCTU) ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನವ ಉದಾರೀಕರಣ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ICDS ಯೋಜನೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತಿತ್ತರ ಕ್ಷೇತ್ರಗಳಿಗೆ ನಿರಂತರವಾಗಿ ಬಜೆಟ್ ನಲ್ಲಿ ಹಣಕಾಸು ಕಡಿತ ಮಾಡಲಾಗುತ್ತಿದೆ.
ಮತ್ತೊಂದು ಕಡೆ ಕಾರ್ಮಿಕ ಕಾನೂನುಗಳನ್ನು ಇಲ್ಲವಾಗಿಸಿ ಸಂಹಿತೆಗಳ ರೂಪದಲ್ಲಿ ಮತ್ತೆ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ದುಡಿಸುವ ಹುನ್ನಾರ ಬಂಡವಾಳ ಶಾಹಿಗಳದ್ದಾಗಿದೆ.
ಸರಕಾರದ ಜನವಿರೋಧಿ ನೀತಿಗಳು ಹಾಗೂ GST ಕ್ರಮಗಳಿಂದಾಗಿ ತೆರಿಗೆ ಹೆಚ್ಚಳ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರಗೊಂಡಿದೆ. ಬಹು ಸಂಖ್ಯೆಯಲ್ಲಿರುವ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಿಲ್ಲ. ಯೋಜನಾ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ಸಂಕಷ್ಟಗಳು ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ಐಕ್ಯ ಹೋರಾಟ ನಡೆಸಬೇಕಾದ ಕಾರ್ಮಿಕರ ಮಧ್ಯೆ ಜಾತಿ ಧರ್ಮದ ವಿಷಬೀಜ ಬಿತ್ತಿ ದುಡಿಯುವ ಜನತೆಯ ಐಕ್ಯತೆಯನ್ನು ಮುರಿಯಲು ಆಳುವ ವರ್ಗಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ ಎಂದು JCTU ತಿಳಿಸಿದೆ.
ಕೇಂದ್ರ ಸರ್ಕಾರದ ರೈತ ಕಾರ್ಮಿಕ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ಕಾರ್ಪೋರೇಟ್ ಕಂಪೆನಿಗಳ ಕಪಿಮುಷ್ಠಿಯಿಂದ ದೇಶವನ್ನು ಉಳಿಸಲು ಮಾರ್ಚ್ 28,29ರಂದು ನಡೆಯಲಿರುವ ಮಹಾಮುಷ್ಕರವನ್ನು ದ.ಕ.ಜಿಲ್ಲೆಯ ಕಾರ್ಮಿಕ ವರ್ಗ ಯಶಸ್ವಿಗೊಳಿಸಬೇಕೆಂದು ಹಾಗೂ 29ರಂದು ಬೆಳಿಗ್ಗೆ 10ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವ್ರತ್ತದಿಂದ ಕಾರ್ಮಿಕರ ಮೆರವಣಿಗೆ ಹೊರಟು 10.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಲಿದ್ದು ಎಲ್ಲಾ ವಿಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು JCTU ದ.ಕ.ಜಿಲ್ಲಾ ಸಮಿತಿಯು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.