ಮಂಗಳೂರು, ಫೆ.19 : ಕಳೆದ ನಾಲ್ಕು ದಿನಗಳಿಂದ ನಾವು ಕಾಲೇಜು ಹೊರಗಿದ್ದೇವೆ. ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಇಂದು ನಮ್ಮ ಸಹಪಾಠಿ ತಲೆತಿರುಗಿ ಬಿದ್ದಾಗ ಶಿಕ್ಷಕರ ಗಮನಕ್ಕೆ ತಂದರೂ ಸ್ಪಂದನೆಯನ್ನೇ ನೀಡಿಲ್ಲ” ಎಂದು ಕಾವೂರು ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಹೊರಗಿರುವವರು ನಮ್ಮ ಮಕ್ಕಳೇ ಅಲ್ಲ ಎಂದು ನಮ್ಮ ಉಪನ್ಯಾಸಕರು ನಮಗೆ ಹೇಳಿದ್ದಾರೆ. ಹಿಜಾಬ್ ಧರಿಸಿ ನಮಗೆ ಒಳಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಕನಿಷ್ಠ ಹಿಂದೆ ವಿದ್ಯಾರ್ಥಿನಿಯರಿಗಾಗಿ ಮೀಸಲಾಗಿಟ್ಟಿದ್ದ ಪ್ರತ್ಯೇಕ ರೂಂ ಅನ್ನಾದರೂ ಬಾಗಿಲು ತೆರೆದು ಅಲ್ಲಿರಲು ಅವಕಾಶ ನೀಡಿ ಎಂದರೆ ಅದನ್ನೂ ನೀಡುತ್ತಿಲ್ಲ. ಮಾನವೀಯತೆಯೇ ಇಲ್ಲದಂತೆ ಉಪನ್ಯಾಸಕರು ವರ್ತಿಸುತ್ತಿದ್ದಾರೆ ಎಂದು ಹಿಜಾಬ್ ಇಲ್ಲದೆ ತರಗತಿ ಪ್ರವೇಶಿಸಲು ಇಚ್ಚಿಸದ ಕಾವೂರು ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದಲೂ ಈ ವಿದ್ಯಾರ್ಥಿನಿಯರು ಕಾಲೇಜು ತರಗತಿ ಅವಕಾಶಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ಬೆಳಗ್ಗೆ ವಿದ್ಯಾರ್ಥಿನಿಯೊಬ್ಬರು ತಲೆತಿರುಗಿ ಬಿದ್ದಾಗ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಪಿಯು ಕಾಲೇಜಿನ ಉಪನ್ಯಾಸಕರು ಯಾರೂ ಮುಂದೆ ಬಂದಿಲ್ಲ. ನಾವು ಹೊರಗಿನಿಂದ ವಾಹನದ ವ್ಯವಸ್ಥೆ ಮಾಡಿಸುವ ಹಾಗಾಗಿದೆ. ಇಂತಹ ಅಮಾನವೀಯತೆ ಕಂಡಾಗ ಬೇರಸವಾಗುತ್ತದೆ ಎಂದು ಪದವಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.