ಬೆಳ್ತಂಗಡಿ: ತಾಲೂಕಿನಲ್ಲಿ ಬುಧವಾರ ಮಳೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಸೋಮವಾರ ಸಂಜೆ ಆರಂಭವಾದ ಮಳೆ ಮಂಗಳವಾರ ಮಧ್ಯರಾತ್ರಿ ತನಕವೂ ನಿರಂತರವಾಗಿ ಮುಂದುವರೆಯಿತು. ಮಂಗಳವಾರ ದಿನವಿಡಿ ಭಾರಿ ಪ್ರಮಾಣದ ಮಳೆ ಸುರಿಯಿತು. ಈ ಭಾಗಗಳಲ್ಲಿ ಹೆಚ್ಚಿನ ಮಳೆ ಇದ್ದರೂ ನೇತ್ರಾವತಿ, ಮೃತ್ಯುಂಜಯ ನದಿಗಳಲ್ಲಿ ಭಾರಿ ಪ್ರಮಾಣದ ನೀರಿನ ಏರಿಕೆ ಕಂಡು ಬರಲಿಲ್ಲ. ನದಿಗಳ ಉಗಮ ಸ್ಥಾನ ಹಾಗೂ ಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸುರಿಯದಿರುವುದು ಇದಕ್ಕೆ ಕಾರಣವಾಯಿತು. ನದಿಗಳು ಸಾಮಾನ್ಯ ಸ್ಥಿತಿಯತ್ತ ಮರಳಲಾರಂಭಿಸಿವೆ. ಬುಧವಾರ ಮೋಡ ಕವಿದ ವಾತಾವರಣವಿದ್ದು ಆಗಾಗ ಮಳೆ ಸುರಿಯಿತು.
ವಿಪರೀತ ಮಳೆ ಇದ್ದರೂ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಅಲ್ಲಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿಲ್ಲ. ಘಾಟಿ ಪ್ರದೇಶದಲ್ಲಿ ವಿಪರೀತ ಮಂಜಿನ ವಾತಾವರಣವಿದ್ದು ವಾಹನ ಸವಾರರು ಪರದಾಟ ನಡೆಸಿದರು. ಇಲ್ಲಿನ ಜಲಪಾತ ಪ್ರದೇಶಗಳು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರು ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ವೀಕ್ಷಿಸುವುದು ಸುಗಮ ಸಂಚಾರಕ್ಕೆ ಸಮಸ್ಯೆ ನೀಡುತ್ತಿದೆ. ಕೆಲವು ದಿನಗಳ ಹಿಂದೆ ಉಜಿರೆ- ಚಾರ್ಮಾಡಿ ಪ್ರದೇಶದ ಹೆದ್ದಾರಿ ಹೊಂಡಗಳನ್ನು ಮುಚ್ಚಲಾಗಿತ್ತು. ಮಳೆಯಿಂದ ಮತ್ತೆ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿವೆ.
ಘಾಟಿ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗುವ ತೊಂದರೆಗಳನ್ನು ಎದುರಿಸಲು ಹಾಗೂ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಎರಡು ಜೆಸಿಬಿ ವಾಹನ ಹಾಗೂ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.”