ಮಂಗಳೂರು, ಮೇ.8: ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮಂಗಳೂರು ಇಲ್ಲಿಗೆ ಸುಮಾರು 40,000 ರೂ. ಮೌಲ್ಯದ ಶುದ್ಧ ನೀರು ಪೂರೈಕೆ ಉಪಕರಣವನ್ನು (ವಾಟರ್ ಪ್ಯೂರಿಫೈಯರ್) ರೋಟರಿ ಕ್ಲಬ್ ಮಂಗಳೂರು ಸಿಟಿ ಇದರ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.
ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಅವರು ಉಪಕರಣವನ್ನು ಲೇಡಿಗೋಶನ್ ಆಸ್ಪತ್ರೆಗೆ ಹಸ್ತಾಂತರಿಸಿದರು. ಮನುಷ್ಯನ ಮೂಲ ಅವಶ್ಯಕತೆಗಳಲ್ಲಿ ಒಂದಾದ ಶುದ್ಧ ಜಲವನ್ನು ತಾಯಂದಿರ ಉಪಯೋಗಕ್ಕಾಗಿ ಕೊಡಮಾಡಿರುವ ರೋಟರಿ ಕ್ಲಬ್ನ ಪ್ರಯತ್ನದಲ್ಲಿ ಸಹಕರಿಸಿದ ಅರಿವಳಿಕೆ ತಜ್ಞ ಡಾ. ರಂಜನ್ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಕನ್ಯೂಟ್ ಪಿಂಟೋ ಅವರ ಸಮಾಜ ಸೇವಾಮುಖಿ ಕ್ರಿಯಾಶೀಲತೆಯನ್ನು ಶ್ಲಾಘಿಸಿದರು.
ಲೇಡಿಗೋಶನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ದುಗಾಪ್ರಸಾದ್ ಎಂ. ಆರ್ ಮಾತನಾಡಿ, ಸರಕಾರಿ ತಾಯಿ ಮಕ್ಕಳ ಆಸ್ಪತ್ರೆಯ ಮೂಲ ಅವಶ್ಯಕತೆಗಳಿಗೆ ಸಕಾಲಿಕ ಸ್ಪಂದನೆಯನ್ನು ನೀಡಿ ಸಮಾಜ ಸೇವಾ ಕೈಂಕಾರ್ಯದಲ್ಲಿ ರೋಟರಿ ಕ್ಲಬ್ ಮಂಗಳೂರು ಸಿಟಿ ಒಂದು ಹೆಗ್ಗುರುತನ್ನು ಮೂಡಿಸಿರುವುದು ಮಾತ್ರವಲ್ಲದೆ ಅದರಲ್ಲಿ ಸಾರ್ಥಕ್ಯತೆಯನ್ನು ಪಡೆದಿದೆ ಎಂದರು.
ರೋಟರಿ ಉಪಗರ್ವನರ್ ಯತೀಶ್ ಬೈಕಂಪಾಡಿ, ನಿತಿನ್ ಕಾಮಾತ್, ಬಸವಕುಮಾರ್, ಗಣೇಶ್, ನಿವಾಸಿ ವೈದ್ಯಾಧಿಕಾರಿಗಳಾದ ಡಾ. ಬಾಲಕೃಷ್ಣ ರಾವ್. ಡಾ.ಅರವಿಂದ್, ಸಹಾಯಕ ಆಡಳಿತಾಧಿಕಾರಿ ರೋಹಿತಾಕ್ಷಿ, ಶುಶ್ರೂಷಾಧಿಕಾರಿ ಮೋಳಿ ಮೋಂತೆರೋ, ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಶುಶ್ರೂಷತಿ ಹರಿಣಾಕ್ಷಿ ಸ್ವಾಗತಿಸಿ, ಅಂಬಿಕಾ ನಿರೂಪಿಸಿದರು. ಶುಶ್ರೂಷಕಿ ಹಂಸ ವರ್ಮ ವಂದಿಸಿದರು.