ಮಂಗಳೂರು, ಮಾ. 24 : ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ವಿಚಾರವಾಗಿ ರಾಜ್ಯಾದ್ಯಂತ ಸುದ್ದಿಯಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಜಾತ್ರೋತ್ಸವಕ್ಕೆ ಶುಕ್ರವಾರ ತೆರೆ ಬೀಳಲಿದೆ. ಮಾರ್ಚ್ 17 ರಿಂದ ಆರಂಭವಾದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಮಾರ್ಚ್ 25ರ ತನಕ ನಡೆಯಲಿದೆ.
ಕೊನೆಯ ದಿನದ ಜಾತೆಯ ಹಿನ್ನಲೆಯಲ್ಲಿ ಗುರುವಾರ ತಡರಾತ್ರಿ ಮಹಾರಥೋತ್ಸವ ನಡೆಯಲಿದೆ. ಶುಕ್ರವಾರ ಬೆಳಗ್ಗಿನ ಜಾವ ಧ್ವಜಾಅವರೋಹಣ ಆಗುವುದರೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಗುರುವಾರ ರಾತ್ರಿ ಮಹಾರಥೋತ್ಸವ ಮುನ್ನ ದೇವರ ಶಯನೋತ್ಸವ ನಡೆಯಲಿದೆ.
ಭಕ್ತರು ದುರ್ಗಾಪರಮೇಶ್ವರಿ ಗೆ ಅರ್ಪಿಸಿದ ಮಲ್ಲಿಗೆಗಳ ರಾಶಿಯ ಮೇಲೆ ದುರ್ಗಾಪರಮೇಶ್ವರಿ ನಿದ್ರಾವಸ್ಥೆಗೆ ಜಾರಲಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ವೆಚ್ಚದ ಮಲ್ಲಿಗೆ ದೇವಿಗೆ ಹರಿದು ಬಂದಿದೆ. ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಪ್ರಯುಕ್ತ ನಡೆದ ಶಯನೋತ್ಸವದಲ್ಲಿ ಬರೋಬ್ಬರಿ ಎರಡು ಕೋಟಿ ರೂಪಾಯಿ ಮೌಲ್ಯದ ಮಲ್ಲಿಗೆ ಹೂವು ದೇವಿಗೆ ಅರ್ಪಣೆಯಾಗಿದೆ.
ಕ್ಷೇತ್ರದಲ್ಲಿ ಶಯನೋತ್ಸವ ವಿಶೇಷ ಮಹತ್ವ ಪಡೆದಿದ್ದು ಸಾವಿರಾರು ಮಂದಿ ಭಕ್ತರು ಶಯನಕ್ಕೆ ಮಲ್ಲಿಗೆ ಅರ್ಪಿಸುತ್ತಿದ್ದಾರೆ. ಸುಮಾರು 5 ಲಕ್ಷ ಚೆಂಡು ಮಲ್ಲಿಗೆ ಅರ್ಪಣೆಯಾಗಿದೆ. ಈ ಬಾರಿ ಕೇವಲ ಹಿಂದು ವ್ಯಾಪಾರಿಗಳು ಮಾತ್ರ ಇಲ್ಲಿ ಮಲ್ಲಿಗೆ ವ್ಯಾಪಾರ ನಡೆಸುತ್ತಿದ್ದಾರೆ.
ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್ ಹಾಕಿದರ ಪರಿಣಾಮ ಈ ಬೆಳವಣಿಗೆ ನಡೆದಿದೆ. ದೇವಿಗೆ ಎರಡು ಕೋಟಿ ಮೌಲ್ಯದ ಒಂದೂವರೆ ಲಕ್ಷ ಅಟ್ಟೆ ಮಲ್ಲಿಗೆ ಸಮರ್ಪಣೆಯಾಗಿದೆ. ಒಂದು ಚೆಂಡು ಮಲ್ಲಿಗೆಗೆ 1200 ರೂಪಾಯಿ ದರವಿದ್ದು, ಅತೀ ಹೆಚ್ಚಿನ ಭಕ್ತರು ಹರಕೆ ರೂಪದಲ್ಲಿ ದುರ್ಗೆಗೆ ಸಲ್ಲಿಕೆ ಮಾಡುತ್ತಾರೆ.
ಶಂಕರಪುರ ಮಲ್ಲಿಗೆ ದೇವಿಗೆ ಅರ್ಪಣೆಯಾಗಿದ್ದು, ಈ ಹಿಂದಿನ ವರ್ಷಗಳಲ್ಲಿ ಮುಸ್ಲಿಂ ವ್ಯಾಪಾರಿಗಳೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಹೂವಿನ ವ್ಯಾಪಾರ ಮಾಡುತ್ತಿದ್ದರು. ಆದರೆ ಈ ಬಾರಿ ನಿಷೇಧದ ಕಾರಣದಿಂದ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿರಲಿಲ್ಲ. ಹಿಂದೂ ವ್ಯಾಪಾರಸ್ಥರೇ ಮಲ್ಲಿಗೆ ಹೂವಿನ ವ್ಯಾಪಾರ ಮಾಡಿದ್ದಾರೆ.
ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಮೂವತ್ತೆರೆಡು ಗ್ರಾಮಗಳಿಗೆ ಸೇರಿದ ಮಾಗಣೆಯ ದೇವಸ್ಥಾನವಾಗಿದ್ದು, ಅತೀ ಹೆಚ್ಚು ಭಕ್ತರನ್ನು ಒಳಗೊಂಡ ಕ್ಷೇತ್ರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅತೀ ಕಾರಣಿಕ ಕ್ಷೇತ್ರ ಅಂತಾಲೂ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಖ್ಯಾತಿಗಳಿಸಿದೆ.