ಮಂಗಳೂರು: ಕಿನ್ನಿಗೋಳಿಯ ಎಂಟನೇ ವರ್ಷದ ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಸಂಭ್ರಮದ ವಿಸರ್ಜನಾ ಮೆರವಣಿಗೆಯು ಬುಧವಾರ ಸಂಜೆ ಕಿನ್ನಿಗೋಳಿ ಪೇಟೆಯಲ್ಲಿ ನಡೆಯಿತು. ಈ ಸಂದರ್ಭ ಭಾವೈಕ್ಯತೆ ಸಾರುವ ನಿಟ್ಟಿನಲ್ಲಿ ಶಾಂತಿನಗರ ಗುತ್ತಕಾಡು ಹಾಗೂ ಕಿನ್ನಿಗೋಳಿಯ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿಗೆ ಸಿಹಿ ತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಿದರು.
ಶಾರದಾ ಮಾತೆಯ ಮೆರವಣಿಗೆಯು ಬಳಿಕ ಮೂರುಕಾವೇರಿ ದಾರಿಯಾಗಿ ಕಟೀಲಿನಲ್ಲಿ ಸಂಪನ್ನ ಕಂಡಿತು. ಹತ್ತಾರು ಟ್ಯಾಬ್ಲೋಗಳು, ವಿವಿಧ ವೇಷಧಾರಿಗಳು, ಚೆಂಡೆ, ಭಜನಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದರು. ಈ ನಡುವೆ ಮೊದಲ ಬಾರಿಗೆ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ಹಂಚಿ, ತಂಪು ಪಾನೀಯ ನೀಡಿ ಭಾವೈಕ್ಯತೆ ಮೆರೆದರು.