ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಶ್ವಾನ ಮಾಲೀಕ ದೂರು ನೀಡಿದ ಮಹಿಳೆ ಮತ್ತು ಆಕೆಯ ಮಗನ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಸದ್ಯ ಘಟನೆ ಸಂಬಂಧ ನಾಯಿ ಮಾಲೀಕನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ನಂಜುಂಡ ಬಾಬು ಬಂಧಿತ ಆರೋಪಿ.
ಜೂನ್ 13 ರಂದು ಮನೆಕೆಲಸದಾಕೆ ಪುಷ್ಪಾ ಕೆಲಸಕ್ಕೆ ಹೋಗುತ್ತಿದ್ದಾಗ ಸಾಕು ನಾಯಿ ಆಕೆಯ ಮೇಲೆ ಹಲವು ಬಾರಿ ದಾಳಿ ಮಾಡಿತ್ತು. ಇದನ್ನುಕಂಡ ಬಾಬು ಮತ್ತು ಗಾಯತ್ರಿ ಗಾಯಗೊಂಡಿದ್ದ ಪುಷ್ಪಾಳನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಯಾವುದೇ ಪೊಲೀಸ್ ದೂರು ನೀಡದಂತೆ ಪುಷ್ಪಾ ಮತ್ತು ಆಕೆಯ ಮಗನನ್ನು ಕೋರಿಕೊಂಡಿದ್ದರು.
ಅಲ್ಲದೆ ಅವರ ವೈದ್ಯಕೀಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ಕೆಲಸ ಮಾಡಲು ಸಾಧ್ಯವಾಗುವವರೆಗೆ ಹಣ ನೀಡುವುದಾಗಿ ಭರವಸೆ ನೀಡಿದರು. ಆದರೆ, ಅವರು ತಮ್ಮ ಭರವಸೆಯನ್ನು ಈಡೇರಿಸಲಿಲ್ಲ. ಈ ನಿಟ್ಟಿನಲ್ಲಿ ವೈದ್ಯಕೀಯ ವೆಚ್ಚ ಪಾವತಿಸಲು ನಿರಾಕರಿಸಿದ್ದರಿಂದ ಜುಲೈನಲ್ಲಿ ಪೊಲೀಸ್ ದೂರು ನೀಡಿದ್ದರು. ಇದರಿಂದ ಆಕ್ರೋಶಗೊಂಡ ಅವರು ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಎರಡೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪುಷ್ಪಾ ವಿವರಿಸಿದ್ದಾರೆ.