ಬೆಳ್ತಂಗಡಿ; ಇಲ್ಲಿನ ಮುಖ್ಯ ರಸ್ತೆಯ ಆನ್ ಸಿಲ್ಕ್ ಮಳಿಗೆ ಎದುರು ಸಂಜೆ 7.30 ಕ್ಕೆ ನಡೆದ ರಸ್ತೆ ಅಪಘಾತದಲ್ಲಿ ಮಚ್ಚಿನ ಗ್ರಾಮದ ಬಂಗೇರಕಟ್ಟೆ ಸಾಲ್ಮರ ಮನೆ ನಿವಾಸಿ, ವಾಸು ಮೂಲ್ಯ ಅವರ ಪುತ್ರ ಯತಿನ್ (24) ಎಂಬವರು ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಪಾರೆಂಕಿ ಗ್ರಾಮದ ಪ್ರತೀಬ್ ಎಂಬವರು ದೂರು ನೀಡಿದ್ದು, ಅವರು ಚಲಾಯಿಸುತ್ತಿದ್ದ ಬೈಕ್ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದಂತೆ ಅಡಿಕೆ ವ್ಯಾಪಾರಿಯೊಬ್ಬರ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಸಹಸವಾರ ಯತಿನ್ ಮೂಲ್ಯ ಅವರ ತಲೆಗೆ ಗಂಭೀರ ಗಾಯವಾಗಿದೆ.. ಅವರನ್ನು ಅದೇ ಕಾರಿನಲ್ಲಿ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅವರು ಆಗಲೇ ಕೊನೆಯುಸಿರೆಳೆದರು.
ಪ್ರತೀಬ್ ಮತ್ತು ಯತಿನ್ ಅವರು ಸಂಬಂಧಿಗಳಾಗಿದ್ದು, ಬೆಳ್ತಂಗಡಿ ಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆಂದು ಅವರು ಜೊತೆಯಾಗಿ ಬೈಕಿನಲ್ಲಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಅವರು ಬಸ್ಡ್ಯಾಂಡ್ ಕಡೆಗೆ ಬೈಕಿನಲ್ಲಿ ಬಂದಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.