ಬೆಳ್ತಂಗಡಿ: ಪ್ರಧಾನಿಯವರ ಕಲ್ಪನೆಯ ಸ್ವಚ್ಚ ಭಾರತ, ಉಜ್ವಲ ಯೋಜನೆ, ಸುಕನ್ಯಾ ಸಮೃದ್ಧಿ ಸೇರಿದಂತೆ ಅನೇಕ ಯೋಜನೆಗಳಿಂದ ನಮ್ಮ ದೇಶದ ಮಹಿಳೆಯರ ಸಬಲೀಕರಣ ನಡೆಯುತ್ತಿದೆ. ಇದಕ್ಕೆ ರಾಜ್ಯ ಸರಕಾರವು ಉತ್ತಮ ಬೆಂಬಲ ನೀಡುತ್ತಿದೆ. ಶಾಸಕ ಹರೀಶ್ ಪೂಂಜ ತಾಲೂಕಿನ ಪ್ರತಿ ಗ್ರಾಮಗಳ ಮೂಲ ಭೂತ ಸೌಕರ್ಯ ವೃದ್ಧಿಗೆ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರಕ್ಕೆ ಎಂಟು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಸಹಯೋಗದಲ್ಲಿ ವೇಣೂರಿನ ಭರತೇಶ ಸಭಾಭವನದಲ್ಲಿ ಮಂಗಳವಾರ ನಡೆದ ಮಹಿಳಾ ಸಮಾವೇಶ, ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿಗೆ 1640 ಆಶ್ರಯ ಮನೆ: ಶಾಸಕ ಪೂಂಜ
ತಾಲೂಕಿಗೆ 1,640 ಆಶ್ರಯ ಮನೆಗಳು ಮಂಜೂರಾಗಿದ್ದು,ಮುಂದಿನ ಒಂದು ತಿಂಗಳೊಳಗೆ ಕೆಲಸದ ಆದೇಶ ಸಿಗಲಿದೆ ಎಂದು ತಿಳಿಸಿದ ಶಾಸಕ ಹರೀಶ್ ಪೂಂಜ, ಜಲ ಜೀವನ್ ಯೋಜನೆಯಲ್ಲಿ ತಾಲೂಕಿನ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಆಗಲಿದ್ದು ಇದರ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಮಹಿಳೆಯರು ಸಾಧನೆಯಲ್ಲಿ ಹಿಂದುಳಿದಿಲ್ಲ.ಅವರ ಸಾಧನೆಗಳನ್ನು ಗುರುತಿಸಿ,ಗೌರವಿಸುವುದು ಮುಖ್ಯ.ಅಭಿನಂದನೆಗಳು ಸಾಧನೆಗೆ ಸ್ಪೂರ್ತಿ ಎಂದರು.
ಮಹಿಳೆಯರ ಅನುಕೂಲಕ್ಕೆ ಇನ್ನಷ್ಟು ಯೋಜನೆಗಳು: ಸುದರ್ಶನ್ ಮೂಡಬಿದ್ರೆ
ಪ್ರಧಾನಿ ಮೋದಿಯವರು ಅಧಿಕಾರದ ಬಗ್ಗೆ ಯೋಚಿಸದೆ ಜನರ ಆಶೋತ್ತರಳ ಈಡೇರಿಕೆಯ ಧ್ಯೇಯ ದೊಂದಿಗೆ ದೇಶದ ಅಭಿವೃದ್ಧಿಯ ಗುರಿಯೊಂದಿಗೆ ಕೆಲಸ ಮಾಡುತ್ತಿರುವುದರಿಂದ ಭಾರತವನ್ನು ವಿಶ್ವವೇ ಗುರುತಿಸುವಂತೆ ಆಗಿದೆ.ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಇನ್ನಷ್ಟು ಯೋಜನೆಗಳು ರೂಪು ಗೊಳ್ಳುತ್ತಿವೆ.ಮಹಿಳಾ ಮೀಸಲಾತಿ ಸೇರಿದಂತೆ ಇನ್ನಿತರ ಯೋಜನೆಗಳು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲ ನೀಡಲಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದರು.
ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ,ಉಪಾಧ್ಯಕ್ಷರಾದ ರೂಪಾ ಡಿ,ಧನಲಕ್ಷ್ಮಿ ಜನಾರ್ದನ್,ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಾ,ಮಾಜಿ ಶಾಸಕ ಪ್ರಭಾಕರ ಬಂಗೇರ,ಆರ್.ಸಿ.ನಾರಾಯಣ್ ಬೆಳ್ತಂಗಡಿಯ ಬಿಜೆಪಿ ಮಂಡಲ ಕಾರ್ಯದರ್ಶಿ ಗಣೇಶ್ ಗೌಡ ನಾವೂರು,ವೇಣೂರು ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್, ಉಪಸ್ಥಿತರಿದ್ದರು
ಹಿರಿಯರಾದ ನೀಲಮ್ಮ ಗುರುವಾಯನಕೆರೆ ಕಾರ್ಯಕ್ರಮ ಉದ್ಘಾಟಿಸಿದರು. ನಾರಾವಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಅಂಡಿಂಜೆ ಸ್ವಾಗತಿಸಿದರು. ವಿದ್ಯಾ ಶ್ರೀನಿವಾಸ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು. ಹೇಳ ಮೋರ್ಚಾದ ತಾಲೂಕು ಪ್ರಧಾನ ಕಾರ್ಯದರ್ಶಿ ಅಮಿತಾ ವಂದಿಸಿದರು.
- ಎಸ್ಸೆಸ್ಸೆಲ್ಸಿಯಲ್ಲಿ 600ಹಾಗೂ ಅದಕ್ಕಿಂತ ಹೆಚ್ಚು ಅಂಕಗಳಿಸಿದ 60ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.
- ಹಾಲು ಉತ್ಪಾದಕ ಮಹಿಳಾ ಸಂಘದ ಅಧ್ಯಕ್ಷೆಯರನ್ನು ಹಾಗೂ ದಿನಕ್ಕೆ 50ಲೀ.ಗಿಂತ ಅಧಿಕ ಹಾಲನ್ನು,ಹಾಲು ಉತ್ಪಾದಕ ಸಂಘಗಳಿಗೆ ಒದಗಿಸುವ ಮಹಿಳಾ ಸದಸ್ಯರನ್ನು ಗೌರವಿಸಲಾಯಿತು.
- ತಾಲೂಕಿನ ಮಹಿಳಾ ನಾಟಿ ವೈದ್ಯರು ಹಾಗೂ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಸನ್ಮಾನಿಸಲಾಯಿತು.
- ಸಭಾಂಗಣದ ಮುಂಭಾಗದಲ್ಲಿ ಮಹಿಳಾ ಸ್ವ ಸಹಾಯ ಸಂಘದವರ ತಯಾರಿಸಿದ ಆಹಾರೋತ್ಪನ್ನಗಳ ಮಳಿಗೆಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ತಾಲೂಕಿನ 526ಮಂದಿಗೆ ಉಜ್ವಲ ಗ್ಯಾಸ್ ಯೋಜನೆಯನ್ನು ನೀಡಲಾಯಿತು.ತಾಲೂಕಿನಲ್ಲಿ ಒಟ್ಟು 18,000ಮಂದಿ ಈ ಪ್ರಯೋಜನ ಪಡೆದಿದ್ದಾರೆ.2.10ಲಕ್ಷ ಮಂದಿ ಕೃಷಿ ಸಮ್ಮಾನ್ ಯೋಜನೆಗೆ ಒಳ ಪಟ್ಟಿದ್ದಾರೆ.