ಬೆಳ್ತಂಗಡಿ: ಅರಣ್ಯ ಇಲಾಖೆಯ ಮೂಲಕ ಬೆಳ್ತಂಗಡಿ ತಾಲೂಕು, ನಿಡ್ಲೆ ರಕ್ಷಿತಾರಣ್ಯದಲ್ಲಿ 1300 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನಾಟಿ ಕಾರ್ಯಕ್ರಮ ಆರಂಭಿಸಿದ್ದು, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್ ರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ನಿಡ್ಲೆ, ಧರ್ಮಸ್ಥಳ, ಕೊಕ್ಕಡ, ಶಿಶಿಲದ ಸ್ವಯಂಸೇವಕರು ಶ್ರಮದಾನದಲ್ಲಿ ಪಾಲ್ಗೊಂಡರು.
ಸುಮಾರು 8000 ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗುತ್ತಿದ್ದು, ಗಿಡಗಳನ್ನು ತಲೆ ಹೊರೆಯಲ್ಲಿ ಸಾಗಾಟ ಮಾಡುವ ಹಾಗೂ ನಾಟಿ ಮಾಡುವ ಶ್ರಮದಾನವನ್ನು ಸ್ವಯಂಸೇವಕರು ನಿರ್ವಹಿಸಿದರು. ಹಲಸು, ಹೆಬ್ಬಲಸು, ಪುನರ್ಪುಳಿ, ಕೋಳಿಜುಟ್ಟು ಮತ್ತಿತರ ಗಿಡಗಳನ್ನು ನಾಟಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಉಪ ವಲಯ ಅರಣ್ಯಾಧಿಕಾರಿ ಅಶೋಕ್, ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್, ಅರಣ್ಯ ಸಂರಕ್ಷಕ ಸಂತೋಷ್, ಅರಣ್ಯ ಪರಿವೀಕ್ಷಕ ದಾಮೋದರ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ, ವಿಪತ್ತು ನಿರ್ವಹಣಾ ಸಂಯೋಜಕರಾದ ಗಿರೀಶ್, ಪ್ರಕಾಶ್, ಕೊರಗಪ್ಪ ಗೌಡ, ಗಿರಿಜಾ ಮುಂತಾದವರು ಉಪಸ್ಥಿತರಿದ್ದರು.
ಡಾ| ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ ‘ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಇದಕ್ಕಾಗಿ ‘ಹಸಿರು ಬೆಳೆಸಿ, ಉಸಿರು ಉಳಿಸಿ’ ಎನ್ನುವ ಧ್ಯೇಯ ವಾಕ್ಯದಲ್ಲಿ ಯೋಜನೆಯ ಜನಜಾಗೃತಿ ಪ್ರಾದೇಶಿಕ ವಿಭಾಗ ಹಾಗೂ ಕೃಷಿ ವಿಭಾಗದ ಮೂಲಕ 2021-22ನೇ ಸಾಲಿನಲ್ಲಿ ವಿಶೇಷವಾಗಿ “ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ”ವನ್ನು ಪ್ರಾರಂಭಿಸಲಾಗಿದೆ.
ಈ ನಿಟ್ಟಿನಲ್ಲ್ಲಿ ಕಾಡಿನಲ್ಲಿ ಪ್ರಾಣಿಗಳ ಆಹಾರಕ್ಕಾಗಿ ಹಣ್ಣು ಹಂಪಲುಗಳ ಗಿಡ ನಾಟಿ ಕಾರ್ಯಕ್ರಮಕ್ಕೆ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದ್ದು, ಮಾಜಿ ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿಯವರು ಉಪಸ್ಥಿತರಿದ್ದರು.
ಪ್ರಸ್ತುತ ವರ್ಷವೂ ಯೋಜನೆಯಿಂದ ರಾಜ್ಯದಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನುಅನುಭವಿಸುವ ಗುರಿ ಹೊಂದಲಾಗಿದ್ದು, ರೈತರ ಹೊಲಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಅರಣ್ಯ ಪ್ರದೇಶದಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಉದ್ದೇಶ ಹೊಂದಲಾಗಿದೆ ಎಂದು ಪಾಯಸ್ ತಿಳಿಸಿದರು.