ಸಾರ್ವಜನಿಕ ಆಸ್ಪತ್ರೆಗೆ ೨೫ ಹಾಸಿಗೆಯ ತುರ್ತುನಿಗಾ ಘಟಕ
ಬೆಳ್ತಂಗಡಿ: ಕೋವಿಡ್ ಕಾಲಘಟ್ಟದ ಬಳಿಕದ ದಿನಗಳಲ್ಲಿ ದೇಶದಲ್ಲಿ ಆರೋಗ್ಯಪೂರ್ಣ ಸಮಾಜ ಸೃಷ್ಟಿಸುವ ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳಗಳನ್ನು ರಾಷ್ಟ್ರವ್ಯಾಪಿ ಆಯೋಜಿಸಲಾಗಿದೆ. ಬೆಳ್ತಂಗಡಿ ಜನತೆ ಆರೋಗ್ಯ ರಕ್ಷಣೆಗಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ೨೫ ಹಾಸಿಗೆಯ ತುರ್ತು ನಿಗಾ ಘಟಕ(ಐಸಿಯು) ಸ್ಥಾಪಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ದ.ಕ.ಜಿಂ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ತಾಲೂಕು ಆಡಳಿತ, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ಹಾಗೂ ಮಂಗಳೂರು ಕೆ.ಎಂ.ಸಿ. ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಉಜಿರೆಯ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಎ.೧೯ರಂದು ಬೆಳ್ತಂಗಡಿ ತಾಲೂಕು ಮಟ್ಟದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಆಸ್ಪತ್ರೆಯಲ್ಲಿ ಈಗಾಗಲೆ ೩ ಐಸಿಯು ಘಟಕವಿದ್ದು ಹೆಚ್ಚುವರಿಯಾಗಿ ೨೨ ನೂತನ ಐಸಿಯು ಬೆಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಉಳಿದಂತೆ ಎಚ್.ಪಿ.ಸಿ.ಎಲ್. ಮೂಲಕ ೧೦ ಲಕ್ಷ ರೂ., ರೋಟರಿ ಸಹಯೋಗದಲ್ಲಿ ಕಣ್ಣಿಗೆ ಸಂಬಂಧಿಸಿ ಸೇರಿ ಡಯಾಲಿಸಿಸ್ ಯಂತ್ರ, ಇನ್ನಿತರ ಸಲಕರಣೆಗಳನ್ನು ಒದಗಿಸಲಾಗುವುದು. ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ಪ್ರಾಸ್ತಾವಿಸಿ ಮಾತನಾಡಿ, ಕೋವಿಡ್ ಕಾಲಘಟ್ಟದಲ್ಲಿ ಭಾರತ ಜಾಗತಿಕವಾಗಿ ಸಮರ್ಥವಾಗಿ ನಿರ್ವಹಿಸಿದೆ. ಜನತೆಗೆ ಆಯುಷ್ಮಾನ್ ಕಾರ್ಡ್, ಸಮಗ್ರ ಮಾಹಿತಿಯುಳ್ಳ ಡಿಜಿಟಲ್ ಹೆಲ್ತ್ ಐಡಿ ಜತೆಗೆ ಆರೋಗ್ಯ ಮಾಹಿತಿ ನೀಡುವ ನೆಲೆಯಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಮಹೇಶ್ ಜೆ., ತಾ.ಪಂ. ಇ.ಒ. ಕುಸುಮಾಧರ ಬಿ., ಉಜಿರೆ ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ತಾಲೂಕು ಆರೋಗ್ಯ ಇಲಾಖೆ ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿ, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ| ರಾಜೇಶ್, ಸಿಡಿಪಿಒ ಪ್ರಿಯಾ ಆಗ್ನೆಸ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ತಾರಾಕೇಸರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಗದೀಶ್, ನ.ಪಂ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಆಯುಷ್ಮಾನ್ ಇಲಾಖೆಯ ಡಾ| ಸಹನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆ ಕಾರ್ಯಕ್ರಮ ಸಂಯೋಜಕ ಅಜಯ್ ಸ್ವಾಗತಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಕಾರ್ಯಕ್ರಮ ನಿರೂಪಿಸಿದರು.
ಜಾಥಾ, ಜಾಗೃತಿ ಪ್ರಹಸನ
ಉಜಿರೆಯ ಸರ್ಕಲ್ನಿಂದ ಕೃಷ್ಣಾನುಗ್ರಹ ಸಭಾಭವನದವರೆಗೆ ಆರೋಗ್ಯ ಜಾಗೃತಿ ಜಾಥಾ, ಆರೋಗ್ಯ ರಕ್ಷಣೆ ಕುರಿತು ಪ್ರಹಸನ ಜರಗಿತು.
ಕೋವಿಡ್ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರ ಸಹಿತ ಆರೋಗ್ಯ ಇಲಾಖೆಯ ಸಿಬಂದಿಗಳ ಸೇವೆ ಶ್ಲಾಘನೀಯ. ಇದೀಗ ಸರಕಾರವು ತಾಲೂಕಿಗೆ ೫೪ ಕಮ್ಯುನಿಟಿ ಹೆಲ್ತ್ ಆಫೀಸರ್ಗಳನ್ನು ನೂತನವಾಗಿ ನೇಮಕಮಾಡಿದೆ. ಇದಕ್ಕೆ ಪೂರಕವಾಗಿ ಗ್ರಾಮಗಳಿಗೆ ಹೆಚ್ಚಿನ ಸೌಲಭ್ಯ ನೀಡುವ ದೃಷ್ಟಿಯಿಂದ ಪ್ರತಿಗ್ರಾಮದಲ್ಲಿ ಬಿಪಿ ಪರೀಕ್ಷೆ, ಇಸಿಜಿ ಸೇರಿದಂತೆ ಅಗತ್ಯ ಸಲಕರಣೆಗಳು ಇರುವ ಕ್ಲಿನಿಕ್ ತೆರೆಯಲು ರಾಜ್ಯದಲ್ಲೆ ಮೊದಲ ಚಿಂತನೆ ನಡೆಸಲಾಗಿದೆ. – ಶಾಸಕ ಹರೀಶ್ ಪೂಂಜ