ಬೆಳ್ತಂಗಡಿ: ಉತ್ತರಪ್ರದೇಶ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಬೆಂಗಳೂರು ನಗರ ಮಹದೇವಪುರ ಕ್ಷೇತ್ರದ ಹೂಡಿ ಗ್ರಾಮದಿಂದ ಧರ್ಮಸ್ಥಳಕ್ಕೆ ಹೊರಟಿರುವ ಪಾದಯಾತ್ರೆ ಮಂಗಳವಾರ ಚಾರ್ಮಾಡಿ ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನವನ್ನು ತಲುಪಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ, ಸದಸ್ಯರಾದ ಶಾರದಾ, ಪವನ್ ರಾವ್, ನಾಗೇಶ್ ಮೂಲ್ಯ,ಬಾಲಕೃಷ್ಣ ಗೌಡ ಅಡಿಮಾರು, ಅಖಿಲೇಶ್ ರಾವ್, ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ಉಪಾಧ್ಯಾಯ, ದಿವಾಕರ್ ಭಟ್ ಹಾಗೂ ಗ್ರಾಮಸ್ಥರು, ತಂಡದ ಸದಸ್ಯರನ್ನು ಸ್ವಾಗತಿಸಿದರು.
ಈ ಬಾರಿ ಉತ್ತರಪ್ರದೇಶ ಚುನಾವಣೆಯಲ್ಲಿ ಯೋಗಿಯವರ ತಂಡ 320 ಸ್ಥಾನಗಳನ್ನು ಗಳಿಸಬೇಕು ಎಂಬ ಉದ್ದೇಶದಿಂದ
ಹೂಡಿ ಗ್ರಾಮದಿಂದ ಧರ್ಮಸ್ಥಳಕ್ಕೆ 320 ಕಿಮೀ.ವ್ಯಾಪ್ತಿಯ ಈ ಪಾದಯಾತ್ರೆ ಫೆ.6 ರಂದು ಆರಂಭವಾಗಿದೆ. ಈ ತಂಡದಲ್ಲಿ ವರ್ತಕರು,ಕೃಷಿಕರು ಸೇರಿದಂತೆ 15 ಮಂದಿ ಸಮಾನಮನಸ್ಕರು ಇದ್ದಾರೆ.
ಈ ತಂಡ 2019ರಲ್ಲಿ ಬೆಂಗಳೂರಿನಿಂದ ಆಯೋಧ್ಯೆ ತನಕ 2060 ಕಿಮೀ ಪಾದಯಾತ್ರೆ ನಡೆಸಿತ್ತು. ಪಾದಯಾತ್ರೆಗಾಗಿ ವಿಶೇಷ ರಥವೊಂದನ್ನು ರಚಿಸಿದ್ದು, ದಿನವೊಂದಕ್ಕೆ 30ಕಿಮೀ. ಯಾತ್ರೆ ಮಾಡಲಾಗುತ್ತದೆ. ಸ್ಥಳೀಯ ದೇವಾಲಯ, ಶಾಲೆ,ಕಾಲೇಜುಗಳಲ್ಲಿ ವಸತಿ ಹೂಡಲಾಗುತ್ತದೆ. ಕೆಲವೊಮ್ಮೆ ಇಂತಹ ಸ್ಥಳಗಳು ಸಿಗದ ಸಂದರ್ಭ ಈ ತಂಡ ರಸ್ತೆಬದಿಯಲ್ಲಿ ವಸತಿ ಹೂಡುತ್ತದೆ.ಎಲ್ಲಾ ಕಡೆ ಸ್ಥಳೀಯರು ಇವರಿಗೆ ಅಗತ್ಯ ಆಹಾರ,ಇತರ ವ್ಯವಸ್ಥೆಯನ್ನು ಮಾಡುತ್ತಿದ್ದು ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಬುಧವಾರ ಪಾದಯಾತ್ರೆ ಧರ್ಮಸ್ಥಳ ಕ್ಷೇತ್ರವನ್ನು ತಲುಪಲಿದ್ದು, ಯೋಗಿಯವರ ಹೆಸರಿನಲ್ಲಿ ವಿಶೇಷ ತುಲಾಭಾರವನ್ನು ನಡೆಸಿ,ಅದರ ಪ್ರಸಾದವನ್ನು ಯೋಗಿ ಆದಿತ್ಯನಾಥ್ ಅವರಿಗೆ ತಲುಪಿಸಿ ಬಳಿಕ ಕೆಲವು ದಿನ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಾಗುವುದು ಎಂದು ತಂಡದ ಮುಖ್ಯಸ್ಥ ರಾಮಭಕ್ತ ಮಂಜುನಾಥ ತಿಳಿಸಿದ್ದಾರೆ.
ಕೇಬಲ್ ಮಂಜುನಾಥ, ಇಮ್ಮಡಿಹಳ್ಳಿ ಶ್ರೀನಿವಾಸ, ಉಮೇಶ ಸ್ವಾಮಿ,ಕಿರಣ ಚನ್ನಸಂದ್ರ,ಸುಧಾಕರ, ರೆಡ್ಯಪ್ಪ,ಆಂಜಿ, ಮುನಿಕೃಷ್ಣ,ವೆಂಕಟೇಶ ಶೆಟ್ಟಿ ತಂಡದ ಪ್ರಮುಖ ಸದಸ್ಯರಾಗಿದ್ದು,ಹಾಸನದಿಂದ ರಾಜೇಶ್ ಹಾಗೂ ರಾಮೇಗೌಡ ತಂಡವನ್ನು ಸೇರಿಕೊಂಡಿದ್ದಾರೆ.