ಬೆಳ್ತಂಗಡಿ : ಉಜಿರೆ- ಧರ್ಮಸ್ಥಳ ರಸ್ತೆಯಲ್ಲಿ ನೀರಚಿಲುಮೆಯ ಸಮೀಪ ಭಾರೀ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.
ಯಾವುದೇ ಮಳೆ ಗಾಳಿ ಇಲ್ಲದ ಮಧ್ಯಾಹ್ನದ ವೇಳೆ ಮರ ಏಕಾ ಏಕಿ ರಸ್ತೆಗೆ ಉರುಳಿ ಬಿದ್ದಿದೆ. ಈ ಸಮಯದಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳಿರದಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಮರ ಬಿದ್ದು ವಿದ್ಯುತ್ ಲೈನಿಗೂ ಹಾನಿಯಾಗಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವು ಗೊಳಿಸಿದರು.
ಅಪಾಯಕಾರಿ ಮರಗಳ ತೆರವಿಗೆ ಒತ್ತಾಯ: ಉಜಿರೆ ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿಯೇ ಹಲವಾರು ಅಪಾಯಕಾರಿ ಮರಗಳು ಯಾವುದೇ ಕ್ಷಣದಲ್ಲಿ ರಸ್ತೆಗೆ ಉರುಳುವ ಸ್ಥಿತಿಯಲ್ಲಿ ಇದ್ದು ಈ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಕರು ಒತ್ತಾಯಿಸುತ್ತಿದ್ದಾರೆ.
ಕೆಲ ವರ್ಷದ ಹಿಂದೆ ಇದೇ ರಸ್ತಯಲ್ಲಿ ಮರ ಮುರಿದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಇಬ್ಬರು ಮೃತಪಟ್ಟಿದ್ದರು. ಇನ್ನು ಇಂತಹ ಅನಾಹುತಗಳು ನಡೆಯುವ ಮೊದಲೆ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಮರಗಳ ತೆರವಿಗೆ ಮುಂದಾಗುವಂತೆ ಒತ್ತಾಯಿಸುತ್ತಿದ್ದಾರೆ.