ಉಜಿರೆ:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ನಾಟಕ ,ಯಕ್ಷಗಾನ ಹಾಗು ಚಲನಚಿತ್ರಗಳಿಂದ ತುಳು ಭಾಷೆ,ಕಲೆ ಮತ್ತು ಸಂಸ್ಕೃತಿ ಸಮೃದ್ಧವಾಗಿ ಬೆಳೆದಿದೆ. ತಾಲೂಕಿನಲ್ಲಿ ನಡೆದ ಜಿಲ್ಲಾ ಮಟ್ಟದ ತುಳು ನಾಟಕೋತ್ಸವ ನಾಟಕ, ಕಲೆ ಹಾಗು ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿದೆ. ಮುಂದಿನ ವರ್ಷದಲ್ಲಿ ತುಳು ನಾಟಕೋತ್ಸವಕ್ಕೆ ಇನ್ನಷ್ಟು ಶಕ್ತಿ ನೀಡುವ ಕಾರ್ಯ ಕೈಗೊಂಡು ರಂಗಭೂಮಿಯ ಕಲೆ ಮತ್ತು ಕಲಾವಿದರನ್ನು ಉಳಿಸಿ,ಬೆಳೆಸುವ
ಕಾರ್ಯಕ್ಕೆ ಸರ್ವ ರೀತಿಯ ಸಹಕಾರ,ಪ್ರೋತ್ಸಾಹ ನೀಡಲಾಗುವುದೆಂದು ಶಾಸಕ ಹರೀಶ್ ಪೂಂಜಾ ನುಡಿದರು. ಅವರು ಎ 23 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದ ಮಂದಾರ ಕಲಾವಿದರು ಉಜಿರೆ ಅವರು ಏರ್ಪಡಿಸಿದ ಜಿಲ್ಲಾ ಮಟ್ಟದ ತುಳು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ತಂಡಗಳನ್ನು ಅಭಿನಂದಿಸಿ ಶುಭಾಶಂಸನೆಗೈದರು.
ಐದು ದಿನಗಳ ಕಾಲ ನಡೆದ ತುಳು ನಾಟಕೋತ್ಸವದ ಸ್ಪರ್ಧೆಯಲ್ಲಿ ಪುತ್ತೂರಿನ ಮಾನಸ ಕಲಾವಿದರಿಂದ “ಬಂಗಾರ್ ಬಾಬು “, ಕುಡ್ಲದ ಕಲಾಶ್ರೀ ಕುಸಲ್ದ ಕಲಾವಿದೆರ್ ಅವರಿಂದ “ನಾಲಾಯಿ ಮಗುರುಜಿ “,ಫಲ್ಗುಣಿ ಕಲಾತಂಡ ವೇಣೂರು ಅವರಿಂದ “ವಸಂತಿಯಕ್ಕ ಒಲ್ಲೆ ರ್ ಗೆ “, ಪಿಂಗಾರ ಕಲಾವಿದೆರ್ ಬೆದ್ರ ಅವರಿಂದ “ನಂಬುಂಡ ನಂಬುಲೆ” ಮತ್ತು ತಾಂಬೂಲ ಕಲಾವಿದೆರ್ ಅವರಿಂದ “ಆರ್ಗನ್ಟ್ ” ಎಂಬ ತುಳು ನಾಟಕಗಳು ಪ್ರದರ್ಶಿಸಲ್ಪಟ್ಟವು .
ಮಂದಾರ ಪ್ರಶಸ್ತಿ -2022 ಪ್ರದಾನ : ತುಳು ರಂಗ ಕಲಾವಿದ,ನಾಟಕಕಾರ,ನಿರ್ದೇಶಕ ರಮಾ ಬಿ.ಸಿ.ರೋಡ್ ಅವರಿಗೆ “ಅಭಿನಯ ಮಾಣಿಕ್ಯ ” ,ಮತ್ತು ತುಳು ರಂಗಭೂಮಿ ಕಲಾವಿದ ಕಿರಣ್ ಸಾಲಿಯಾನ್ ಸುರ್ಯ ಆವರಿಗೆ “ರಂಗಸಿರಿ” ಬಿರುದಿನೊಂದಿಗೆ ಗಣ್ಯ ಅತಿಥಿಗಳು ಪ್ರಶಸ್ತಿಪ್ರದಾನಗೈದರು. ಪ್ರಶಸ್ತಿ ಸ್ವೀಕರಿಸಿದ ರಮಾ ಬಿಸಿರೋಡ್ ಅವರು ಕಲಾವಿದರಿಗೆ ಕಲಾಭಿಮಾನಿಗಳೇ ಅಭಿಮಾನಿದೇವರು. ಇಂದು ಕಲಾವಿದರಿಗೆ ಗೌರವದ ಸ್ಥಾನವಿದೆ. ಸತ್ತ ನಂತರವೂ ಬದುಕುವ ಹಕ್ಕಿರುವುದು ಕಲಾವಿದನಿಗೆ ಮಾತ್ರ ಎಂದು ನುಡಿದು ಕೃತಜ್ಞತೆ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಳು ನಾಟಕ ,ಚಲನಚಿತ್ರ ಕಲಾವಿದ ಸುಂದರ ರೈ ಮಂದಾರ,ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ದುರ್ಗಾಪ್ರಸಾದ ರೈ ಕುಂಬ್ರ ಮತ್ತು ಹಮೀದ್ ಪುತ್ತೂರು ,ಮುಖ್ಯ ಅತಿಥಿಗಳಾಗಿ ಭಾ ಗವಹಿಸಿದ್ದ ಐ ಸಿ. ಕೈಲಾಸ್ ಗೌಡ ಮತ್ತು ಕಲಾಪೋಷಕ ಪುಷ್ಪರಾಜ ಹೆಗ್ಡೆ ಸತ್ತಿಕಲ್ಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂದಾರ ಕಲಾವಿದರು ಉಜಿರೆಯ ಸಂಚಾಲಕ ಪ್ರವೀಣ್ ಗರ್ಡಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಪರ್ಧಾ ಫಲಿತಾಂಶ :
ಜಿಲ್ಲಾ ಮಟ್ಟದ ತುಳು ನಾಟಕೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ 333,333/– ಮತ್ತು ಮಂದಾರ ಪ್ರಶಸ್ತಿಯನ್ನು ಕುಡ್ಲದ ಕಲಾಶ್ರೀ ಕುಸಲ್ದ ಕಲಾವಿದೆರ್ ಅವರ “ನಾ ಲಾ ಯಿ ಮಗುರುಜಿ ” ತಂಡ ಹಾಗು ದ್ವಿತೀ ಯ ಬಹುಮಾನ ರೂ 22,222/-ಮತ್ತು ಮಂದಾರ ಪ್ರಶಸ್ತಿ ಯನ್ನು ಬೆದ್ರದ ಪಿಂಗಾರ ಕಲಾವಿದೆರ್ ಅವರ “ನಂಬುನ್ದ ನಂಬುಲೆ “ತಂಡ ಪಡೆಯಿತು. ಗಣ್ಯ ಅತಿಥಿಗಳು ಬಹುಮಾನ ,ಪ್ರಶಸ್ತಿ ಹಾಗು ವೈಯಕ್ತಿಕ ಬಹುಮಾನಗಳನ್ನು ವಿತರಿಸಿದರು. ನಾಟಕೋತ್ಸವದ ಅಂತಿಮ ಪ್ರದರ್ಶನವಾಗಿ ಮಂದಾರ ಕಲಾವಿದರು ಉಜಿರೆ ಅವರಿಂದ ಗುಣಪಾಲ್ ಎಂ. ಎಸ್ ಸಾರಥ್ಯದಲ್ಲಿ ಸುಂದರ ರೈ ಮಂದಾರ ನಿರ್ದೇಶಿಸಿ,ಅಭಿನಯಿಸಿದ “ನಮ ನಮ್ಮಾತೆಗೆ “ತುಳು ಹಾಸ್ಯ ನಾಟಕ ಪ್ರದರ್ಶಿಸಲ್ಪಟ್ಟಿತು. ಮಂದಾರ ಕಲಾವಿದರು ಉಜಿರೆ ತಂಡದ ಅಧ್ಯಕ್ಷ ಗುಣಪಾಲ್ ಎಂ .ಎಸ್ .ಸ್ವಾಗತಿಸಿ, ಶಿಕ್ಷಕ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. (ಚಿತ್ರ: ಮಂದಾರ ಪ್ರಶಸ್ತಿ ಪ್ರದಾನ 1; ರಮಾ ಬಿ ಸಿ ರೋಡ್ ,2.ಕಿರಣ್ ಸಾಲಿಯಾನ್ ಸುರ್ಯ)