ಮಂಗಳೂರು : ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ತುಳು, ತಮಿಳ್, ತೆಲುಗು, ಕನ್ನಡ, ಮಲಯಾಲಂ ಇವುಗಳನ್ನು ಪಂಚ ದ್ರಾವಿಡ ಭಾಷೆಗಳೆನ್ನುತ್ತಾರೆ. ತುಳು ಭಾಷೆ ದ್ರಾವಿಡ ಮೂಲದಿಂದ ಸ್ವತಂತ್ರವಾದ ಅತ್ಯಂತ ಹಳೆಯ ಭಾಷೆಯಾಗಿದೆ ಎಂದು ಭಾಷಾ ತಜ್ಙರು ತಿಳಿಸಿದ್ದಾರೆ.
ತುಳು ಭಾಷೆಯು ಸ್ವಂತ ಲಿಪಿಯನ್ನು ಹೊಂದಿದ್ದು ಸಾಹಿತ್ಯ ಕ್ಷೇತ್ರದಲ್ಲು ಸಮೃದ್ದವಾಗಿದೆ. ತುಳು ಲಿಪಿಯಲ್ಲಿ ಬರೆದಂತಹ ಗ್ರಂಥಗಳಿದ್ದು, ಶಿಲಾ ಶಾಸನಗಳು ಪತ್ತೆಯಾಗಿದೆ.
ಸ್ವತಂತ್ರ ಭಾರತದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಲಂ ಭಾಷೆಗಳು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿ ರಾಷ್ಟ್ರೀಯ ಸ್ಥಾನಮಾನವು ದೊರಕಿದ್ದು ಭಾಷೆಯ ಆಧಾರದಲಿ ರಾಜ್ಯವನ್ನು ಪಡೆದಿವೆ ಆದರೆ ದ್ರಾವಿಡ ಮೂಲದ ಪ್ರಾಚೀನ ತುಳು ಭಾಷೆಗೆ ಎಲ್ಲಾ ರೀತಿಯ ಅರ್ಹತೆಗಳಿದ್ದರು ಸ್ವತಂತ ಭಾರತದಲ್ಲಿ ಯಾವುದೇ ಸ್ಥಾನಮಾನ ದೊರಕ್ಕಿಲ್ಲ.
ತುಳು ಭಾಷೆಯು ಇಂದಿನ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ, ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕುಗಳಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ತಾಲೂಕುಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕುಗಳಲ್ಲಿ ತುಳು ಮಾತನಾಡುತ್ತಾರೆ. ತುಳು ಭಾಷೆಯು ಈ ಭಾಗದ ಜನರ ಮಾತೃಭಾಷೆ ಮತ್ತು ವ್ಯವಹಾರಿಕ ಭಾಷೆಯಾಗಿದೆ. ಆದರೆ ಶಿಕ್ಷಣ ಮತ್ತು ಆಡಳಿತದ ಸ್ಥಾನಮಾನ ಸಿಗದೆ ತುಳು ಭಾಷೆಯು ಅಳಿವಿನ ಅಂಚಿನಲ್ಲಿದೆ.
ಮಾನ್ಯ ಭಾರತ ಸರ್ಕಾರವು ತುಳು ಭಾಷೆಯ ಬೆಳೆವಣಿಗೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ದಕ್ಷಿಣ ಭಾರತದ ತುಳು ಭಾಷಿಗ ಪ್ರಾಂತ್ಯಗಳನ್ನು ಒಗ್ಗೂಡಿಸಿ ರಾಜ್ಯದ ಸ್ಥಾನಮಾನ ಅಥವಾ ಕೇಂದ್ರಾಳಿತ ಪ್ರದೇಶದ ಸ್ಥಾನಮಾನ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಮತ್ತು ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಬೇಕೆಂದು ಎಂದು ತುಳುವೆರೆ ಪಕ್ಷವು ಮಾನ್ಯ ಪ್ರಧಾನಮಂತ್ರಿಗಳಿಗೆ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.