ಬೆಳ್ತಂಗಡಿ: ಗ್ರಾಮ ಪಂಚಾಯಿತಿ,ನಗರ ಪಂಚಾಯಿತಿ, ಪಟ್ಟಣ ಪಂಚಾಯಿತಿಗಳ ಅಭಿವೃದ್ಧಿಯ ಹೊಣೆಹೊತ್ತು ಸ್ಪರ್ಧೆ ನಡೆಸುತ್ತಿದ್ದು ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೇಳಿದರು
ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ, ಗಣಪತಿ ದೇವರ ದರ್ಶನ ನಡೆಸಿ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ,ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.
ಪಂಚಾಯಿತಿ ಸದಸ್ಯರು, ಸಹಕಾರಿ ಬಂಧುಗಳ ಹಾಗೂ ಆತ್ಮೀಯರ ಅಭಿಲಾಷೆಯಂತೆ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ.
ಸಹಕಾರಿ ಕ್ಷೇತ್ರದ ಸೇವೆಯ ಮೂಲಕ ಅವಿಭಜಿತ ದಕ ಜಿಲ್ಲೆಯ ಪ್ರತಿ ಪಂಚಾಯಿತಿ ಹಾಗೂ ಹಳ್ಳಿಗಳ ಸ್ಥಿತಿಯ ಬಗ್ಗೆ ಅಧ್ಯಯನ ಮಾಡಿದ್ದು, ಇಲ್ಲಿರುವ ಕುಂದುಕೊರತೆಗಳ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಅಭಿವೃದ್ಧಿಯ ಚಿಂತನೆ ಪ್ರಮುಖ ಧ್ಯೇಯವಾಗಿದ್ದು, ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಬಯಸಿಲ್ಲ ಎಂದು ಹೇಳಿದರು.
ಪ್ರತಿ ಗ್ರಾಮಪಂಚಾಯತಿ ಮಟ್ಟದಲ್ಲಿ ಪ್ರತಿ ಸದಸ್ಯರನ್ನು ಸಂಪರ್ಕಿಸಲಿದ್ದು,ಈ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ ರೈ, ಐಕಳ ದೇವಿಪ್ರಸಾದ್ ಶೆಟ್ಟಿ, ನಿರಂಜನ ಬಾವಂತ ಬೆಟ್ಟು, ಮಡಂತ್ಯಾರು ಪ್ಯಾಕ್ಸ್ ಅಧ್ಯಕ್ಷ ಅರವಿಂದ, ಉಜಿರೆ ಪ್ಯಾಕ್ಸ್ ಅಧ್ಯಕ್ಷ ಈ. ಸುಂದರ ಗೌಡ, ಬಾಹುಬಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಶಮಂತ ಕುಮಾರ್ ಜೈನ್,ಕುಮಾರ್ ನಾಥ್,ಉಷಾಲತಾ, ವೃಷಭ ಆರಿಗ ಮತ್ತಿತರರು ಉಪಸ್ಥಿತರಿದ್ದರು.