ಪುತ್ತೂರು : ದೆಹಲಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೋವಾ ಮತ್ತು ಕರ್ನಾಟಕ ಡೈರೆಕ್ಟೊರೇಟ್ ಅನ್ನು ಪ್ರತಿನಿಧಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಜ್ಯೂನಿಯರ್ ಅಂಡರ್ ಆಫೀಸರ್ ಹೇಮಸ್ವಾತಿ ಅವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ರವರು ಹೇಮಸ್ವಾತಿ ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಗೌರವವನ್ನು ಸ್ವೀಕರಿಸಿ ಮಾತನಾಡಿದ ಜ್ಯೂನಿಯರ್ ಅಂಡರ್ ಆಫೀಸರ್ ಹೇಮಸ್ವಾತಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾವು ನಡೆಸಿದ ಅಭ್ಯಾಸ, ಅದರ ಅನುಭವಗಳು ಹಾಗೂ ಪೋಷಕರ, ಗುರುಗಳ ಹಾಗೂ ವಿದ್ಯಾಲಯದ ಪ್ರೋತ್ಸಾಹವನ್ನು ಮೆಲುಕುಹಾಕಿದರು.
ಈಕೆ ತಮ್ಮ ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2019-2021ರಲ್ಲಿ ಪಡೆದು ಪ್ರಸ್ತುತ ಪ್ರಥಮ ಪದವಿ ಶಿಕ್ಷಣವನ್ನು ವಿವೇಕಾನಂದ ಪದವಿ ಕಾಲೇಜಿನಲ್ಲಿ ಪಡೆಯುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಯಕ್ಷಗಾನದಲ್ಲಿ ವಿಶೇಷ ಪ್ರಾವಿಣ್ಯತೆಯನ್ನು ಪಡೆದಿದ್ದರು. ಈಕೆ ಸುಳ್ಯದ ಕುರಿಯಾಜೆ ಉದಯಶಂಕರ ಕೆ ಮತ್ತು ವಸಂತಲಕ್ಷ್ಮೀ ದಂಪತಿಗಳ ಪುತ್ರಿ.
ಉಪನ್ಯಾಸಕಿ ದಯಾಮಣಿ ಅಭಿನಂದನಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭ ಕಾಲೇಜಿನ ಎನ್ಸಿಸಿ ಅಧಿಕಾರಿ ಲೆ. ಭಾಮಿ ಅತುಲ್ ಶೆಣೈ, ಹೇಮಸ್ವಾತಿ ಹೆತ್ತವರು, ಪೋಷಕರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.