ಬಂಟ್ವಾಳ: ತನಗೆ ಬೇಕಾದ ನೀರನ್ನು ತಾನೇ ಅನ್ವೇಷಿಸಿ, ಜಗತ್ತಿಗೆ ಸ್ವಾವಲಂಬನೆಯ ಪಾಠ ಹೇಳಿದ ಮಹಾಲಿಂಗ ನಾಯ್ಕರು ಬಂಟ್ವಾಳ ತಾಲೂಕಿನವರು ಎನ್ನಲು ಹೆಮ್ಮೆಯಾಗುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಪದ್ಮಶ್ರೀ ಗೆ ಆಯ್ಕೆಯಾದ ಅಮೈ ಮಹಾಲಿಂಗ ನಾಯ್ಕ ಅವರ ಮನೆಗೆ ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ರವರ ಜೊತೆ ಬೇಟಿ ನೀಡಿ ಮಹಾಲಿಂಗ ನಾಯ್ಕರನ್ನು ಸನ್ಮಾನಿಸಿ ಮಾತನಾಡಿದರು.
ನಾವು ಕೃಷಿಕರಾಗಿದ್ದರೂ, ಮಹಾಲಿಂಗ ನಾಯ್ಕ ಅವರಿಂದ ಬಹಳಷ್ಟು ಕಲಿಯುವ ವಿಚಾರವಿದೆ. ರೈತರು ದೇಶದಲ್ಲಿ ನೀರಿಗಾಗಿ ಹೋರಾಟ ಮಾಡುವುದನ್ನು ನೋಡಿದ್ದೇವೆ. ತನಗೆ ಬೇಕಾದ ನೀರನ್ನ ತಾನೇ ಅನ್ವೇಷಣೆ ಮಾಡಿ ಜಗತ್ತಿಗೆ ತೋರಿಸಿರುವುದು ಮತ್ತು ಕೇಂದ್ರ ಸರ್ಕಾರ ಇವರನ್ನು ಗುರುತಿಸಿರುವುದು ಜಿಲ್ಲೆಗೆ ಸಂದ ಗೌರವ ಎಂದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು ಹಾಗೂ ಏಳು ಶಾಸಕರ ಪರವಾಗಿ ಮಹಾಲಿಂಗ ನಾಯ್ಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ತನ್ನದೇ ಆದ ಕಲ್ಪನೆಯ ಮೂಲಕ ಕೃಷಿಜಗತ್ತಿಗೆ ಹೊಸದನ್ನು ಪರಿಚಯಿಸಿದ ಕಾಯಕಯೋಗಿ ಮಹಾಲಿಂಗ ನಾಯ್ಕರಿಂದ ಇನ್ನಷ್ಟು ಸಲಹೆ ಮಾರ್ಗದರ್ಶನಗಳು ಸಿಗುವಂತಾಗಲಿ, ಎಂದರು.
ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಉಪಾಧ್ಯಕ್ಷ ರಾಘವ ಸಾರಡ್ಕ, ಸದಸ್ಯರಾದ ಪುರುಷೋತ್ತಮ ಕಲ್ಲಂಗಳ, ಜಗಜೀವನ್ ರಾಮ್ ಶೆಟ್ಟಿ, ಜಯಶೀಲ ಅಮೈ, ನಿಕಟ ಪೂರ್ವ ಅಧ್ಯಕ್ಷ ತಾರಾನಾಥ ಆಳ್ವ, ಜಿಲ್ಲಾ ಪಂಚಾಯಿತಿ ನಿಕಟ ಪೂರ್ವ ಸದಸ್ಯ ಜಯಶ್ರೀ ಕೋಡಂದೂರು, ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಆರ್. ಸಿ. ನಾರಾಯಣ, ರಾಜೀವ ಭಂಡಾರಿ, ಹರಿಪ್ರಸಾದ್ ಯಾದವ್, ರಾಜೇಶ್ ಕರವೀರ, ದಯಾನಂದ ಉಜಿರೆಮಾರು, ಜನಾರ್ದನ ಭಟ್ ಅಮೈ, ಬಂಟ್ವಾಳ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ರಮಾನಾಥ ರಾಯಿ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟ್ಟು, ಕಾರ್ತಿಕ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.