ಮಂಗಳೂರು; ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿ ಯುಜಿಸಿ ಹೊರಡಿಸಿರುವ ಆದೇಶವು ಖಂಡನೀಯವಾಗಿದ್ದು, ರಾಜ್ಯಾದ್ಯಂತ ಸೂರ್ಯ ನಮಸ್ಕಾರವನ್ನು ಬಹಿಷ್ಕರಿಸಿ ಕಾಲೇಜುಗಳ ಮುಂಭಾಗ, ವಿವಿಧ ನಗರಗಳಲ್ಲಿ ಕ್ಯಾಂಪಸ್ ಫ್ರಂಟ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ ನಡೆಸಲಾಯಿತು.
ಗಣರಾಜ್ಯೋತ್ಸವದ ದಿನ ಎಲ್ಲಾ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ನಡೆಸಬೇಕೆಂದು ಯುಜಿಸಿ ಸುತ್ತೋಲೆ ಹೊರಡಿಸಿದ್ದು, ಈ ಮುಖಾಂತರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ತಮ್ಮ ಮತೀಯ ಅಜೆಂಡಾಗಳನ್ನು ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ,
ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಹುದೊಡ್ಡದಿದೆ, ಆದರೆ ಅದನ್ನು ನಿವಾರಿಸಲು ಸರಕಾರಕ್ಕೆ ಆಸಕ್ತಿಯಿಲ್ಲ ಬದಲಾಗಿ ಸೂರ್ಯ ನಮಸ್ಕಾರದಂತಹ ಮತೀಯ ಅಜೆಂಡಾಗಳನ್ನು ಶೈಕ್ಷಣಿಕ ವಲಯದಲ್ಲಿ ಹೇರಲು ಮುಂದಾಗಿದ್ದು ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರವಾಗಿದೆಯೆಂದು ಇದನ್ನು ಸಂವಿಧಾನದ ಮೇಲೆ ಭರವಸೆಯಿಟ್ಟಿರುವ ಪ್ರತಿಯೊಬ್ಬರು ವಿರೋಧಿಸಬೇಕೆಂದು ಆಗ್ರಹಿಸಿ ಇಂದು “ಹಿಂದುತ್ವದ ಭಾಗವಾಗಿರುವ ಸೂರ್ಯ ನಮಸ್ಕಾರವನ್ನು ಬಹಿಷ್ಕರಿಸುವ ಮುಖಾಂತರ ಗಣರಾಜ್ಯೋತ್ಸವವನ್ನು ಆಚರಿಸೋಣ” ಎಂಬ ಘೋಷವಾಕ್ಯದಡಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳ ಮುಂಭಾಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಭಿತ್ತಿಪತ್ರ ಪ್ರದರ್ಶಿಸಿ ಸೂರ್ಯ ನಮಸ್ಕಾರವನ್ನು ಬಹಿಷ್ಕರಿಸಲಾಯಿತು.