News Karnataka Kannada
Monday, May 06 2024
ಮಂಗಳೂರು

ಕಿಡಿಗೇಡಿಗಳ ಕೃತ್ಯದಿಂದ ಕಿಂಡಿ ಅಣೆಕಟ್ಟಿನ ತಾತ್ಕಾಲಿಕ ತಡೆಗೋಡೆ ಕುಸಿತ

Mundaje
Photo Credit : News Kannada

ಬೆಳ್ತಂಗಡಿ: ಕಿಡಿಗೇಡಿಗಳ ಅನಪೇಕ್ಷಿತ ಕೃತ್ಯದಿಂದ ನೀರಿನ ಕಾಲುವೆಯ ತಾತ್ಕಾಲಿಕ ತಡೆಗೋಡೆಗೆ ಹಾನಿ ಉಂಟಾಗಿ,ಸುಮಾರು 20 ಕೃಷಿ ಕುಟುಂಬಗಳ ನೂರಾರು ಎಕರೆ ತೋಟಗಳಿಗೆ ನೀರು ಇಲ್ಲದಂತಾಗಿದೆ.

ಮುಂಡಾಜೆ ಗ್ರಾಮದ ಮೃತ್ಯುಂಜಯ ನದಿಯ ಸೇತುವೆ ಬಳಿ ಕಡಂಬಳ್ಳಿ ಕೃಷಿ ತೋಟಗಳ ನೀರಿನ ವ್ಯವಸ್ಥೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಶಾಸಕ ಹರೀಶ್ ಪೂಂಜ ಮುತುವರ್ಜಿಯಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ.

ಕಿಂಡಿ ಅಣೆಕಟ್ಟಿನ ಸುಮಾರು 300 ಮೀ. ಉದ್ದದ ಕಾಲುವೆ, ತಡೆಗೋಡೆ ಇತ್ಯಾದಿ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ.ಕಿಂಡಿ ಅಣೆಕಟ್ಟಿನಿಂದ ಕಳೆದ ನಾಲ್ಕು ದಿನಗಳ ಹಿಂದೆ ಪ್ರಾಯೋಗಿಕವಾಗಿ ನೀರನ್ನು ಕಾಲುವೆಗಳಲ್ಲಿ ಹರಿಸಲಾಗಿತ್ತು.

ಕಿಂಡಿ ಅಣೆಕಟ್ಟಿನ ಅನುದಾನದಿಂದ ನಡೆದ ಕಾಲುವೆಗಿಂತ ಮುಂಭಾಗದ 200 ಮೀ.ದೂರದಲ್ಲಿ, ಸಾಂಪ್ರದಾಯಿಕ ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ಮರಳಿನ ಚೀಲಗಳನ್ನು ಇರಿಸಿ ಪ್ಲಾಸ್ಟಿಕ್ ಹಾಕಿ ತಡೆಗೋಡೆ ನಿರ್ಮಿಸಲಾಗಿತ್ತು. ಈ ಭಾಗದಲ್ಲಿ ಹಿಂದಿನ ವರ್ಷಗಳಲ್ಲು ಇದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು.

ಕುಸಿತಕ್ಕೆ ಕಾರಣ:
ಕಿಂಡಿ ಅಣೆಕಟ್ಟಿನ ಬಳಿ ಮುಖ್ಯ ಕಾಲುವೆಗೆ ಅಡಕೆ ಮರದ ತುಂಡುಗಳನ್ನು ಅಡ್ಡವಾಗಿ ಇರಿಸಿ ನೀರನ್ನು ಹರಿಸಲಾಗುತ್ತದೆ. ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಒಂದೆರಡು ತುಂಡುಗಳನ್ನು ತೆಗೆಯಲಾಗುತ್ತದೆ. ಇದರಿಂದ ಬೇಕಾದಷ್ಟು ಪ್ರಮಾಣದ ನೀರು ಮಾತ್ರ ಕಾಲುವೆಯಲ್ಲಿ ಹರಿದುಬರುತ್ತದೆ. ಕಳೆದ ರಾತ್ರಿ ಯಾರೋ ಕಿಡಿಗೇಡಿಗಳು ಹೀಗೆ ಅಡ್ಡವಾಗಿ ಇರಿಸಿದ್ದ ಐದಾರು ಅಡಕೆ ಮರದ ತುಂಡುಗಳನ್ನು ತೆಗೆದ ಕಾರಣ,ಕಾಲುವೆಯಲ್ಲಿ ವಿಪರೀತವಾಗಿ ನೀರು ಹರಿದು ಮರಳಿನ ಚೀಲಗಳನ್ನು ಇಟ್ಟ ಕಡೆಯಲ್ಲಿ ನೀರಿನ ಒತ್ತಡ ಹೆಚ್ಚಿ ಸುಮಾರು 10ಮೀ.ಗಿಂತ ಅಧಿಕ ಜಾಗದ ತಾತ್ಕಾಲಿಕ ತಡೆಗೋಡೆ ನೀರುಪಾಲಾಗಿದೆ.

ಕೃಷಿಕರಲ್ಲಿ ಬೇಸರ: 
ಉದ್ಘಾಟನೆಗೆ ಸಿದ್ಧಗೊಂಡ ಕಿಂಡಿ ಅಣೆಕಟ್ಟನ್ನು ಕಳೆದ ವಾರ ಸಚಿವ ಮಾಧುಸ್ವಾಮಿ ವೀಕ್ಷಿಸಿ ಇದರ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂದಿನ ಕೆಲವು ದಿನಗಳಲ್ಲಿ ಕಿಂಡಿ ಅಣೆಕಟ್ಟು ಉದ್ಘಾಟನೆಗೂ ಸಿದ್ಧಗೊಂಡಿತ್ತು. ಆದರೆ ಕಿಡಿಗೇಡಿಗಳ ಕೃತ್ಯದಿಂದ ಮತ್ತೆ ತಡೆಗೋಡೆ ನಿರ್ಮಿಸುವ ಅಗತ್ಯವಿದೆ. ಇದರಿಂದ ಮುಂದಿನ ಕೆಲವು ದಿನ ಕಡಂಬಳ್ಳಿ ಭಾಗದ ಕೃಷಿಕರ ತೋಟಗಳಿಗೆ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. 2019ರ ನೆರೆಗೆ ಇಲ್ಲಿನ ಸಾಂಪ್ರದಾಯಿಕ ಕಟ್ಟ ಕಟ್ಟುವ ಸ್ಥಳ ಸಂಪೂರ್ಣ ಕೊಚ್ಚಿ ಹೋದ ಬಳಿಕ ಇಲ್ಲಿಗೆ ಕಿಂಡಿ ಅಣೆಕಟ್ಟು ಮಂಜೂರುಗೊಂಡಿತ್ತು. ಇದರ ಪೂರ್ಣ ಕಾಮಗಾರಿ ವ್ಯವಸ್ಥಿತವಾಗಿ ನಡೆದಿದ್ದು, ಕಡಂಬಳ್ಳಿ ಭಾಗದ ಕೃಷಿಕರ ನೀರಿನ ಸಮಸ್ಯೆಗೆ ಪರಿಹಾರ ದೊರಕಿತ್ತು.ಆದರೆ ಇದೀಗ ಕಿಡಿಗೇಡಿಗಳಿಂದ ಉಂಟಾಗಿರುವ ಹಾನಿಯ ಬಗ್ಗೆ ಕಡಂಬಳ್ಳಿ ವಾಳ್ಯಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು