ಬಂಟ್ವಾಳ : ಕಾರಿಂಜ ದೇವಸ್ಥಾನದ ಸಂರಕ್ಷಣೆಯ ಸಂಕಲ್ಪದ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ಬಂಟ್ವಾಳ, ಶ್ರೀ ಕಾರಿಂಜೇಶ್ವರ ಸಂರಕ್ಷಣಾ ಸಮಿತಿ ಹಾಗೂ ಯತಿವರೇಣ್ಯರ ಆಶೀರ್ವಾದದೊಂದಿಗೆ ಜ.14 ಮಕರ ಸಂಕ್ರಮಣ ದಿನದಿಂದ ಜ.21 ರ ವರಗೆ ರುದ್ರಗಿರಿಯ ರಣಕಹಳೆಯ ಝೇಂಕಾರ – ಗ್ರಾಮ ಗ್ರಾಮಗಳ ಮನೆಮನೆಗಳಿಗೆ ” ಮನೆ ಸಂಪರ್ಕ ಜನಜಾಗರಣ ಅಭಿಯಾನ ”ಎಂಬ ವಿನೂತನ ಶೈಲಿಯ ಹೋರಾಟ ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯ ಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಅವರು ಹೇಳಿದರು.
ಅವರು ಬಿಸಿರೋಡು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈಗಾಗಲೇ ಕಾರಿಂಜ ದೇವಸ್ಥಾನದ ಸಂರಕ್ಷಣೆಯ ದೃಷ್ಟಿಯಿಂದ ರುದ್ರಗಿರಿಯ ರಣಕಹಳೆ ಮತ್ತು ಕಾರಿಂಜೇಶ್ವರ ಭಕ್ತರ ನಡಿಗೆ ಜಿಲ್ಲಾಧಿಕಾರಿ ಕಡೆಗೆ ಮಾಡಿದ ಹೋರಾಟ ಫಲ ನೀಡಲಿಲ್ಲ. ಹಾಗಾಗಿ ಮೂರನೇ ಹಂತದ ಹೋರಾಟವನ್ನು ಕಾನೂನು ರೀತಿಯ ಹೋರಾಟದ ಜೊತೆಯಾಗಿ ಗ್ರಾಮದ ಜನರ ಸಹಕಾರದೊಂದಿಗೆ ಸಂಘಪರಿವಾರದ ಎಲ್ಲರ ಜೊತೆಯಾಗಿ ಶೈಕ್ಷಣಿಕ, ಧಾರ್ಮಿಕ ಸಂಘಟನೆಯ ಜೊತೆಗೆ ಪ್ರತಿಯೊಬ್ಬ ರನ್ನು ವಿಶ್ವಾಸ ಕ್ಕೆ ಪಡೆದುಕೊಂಡು ಸಂಘಟನಾತ್ಮಕ ಹೋರಾಟದ ಚಿಂತನೆಯನ್ನು ಮಾಡಿಕೊಂಡು ಮಕರ ಸಂಕ್ರಾಂತಿ ಯ ಶುಭದಿನದಂದು ಕಾರಿಂಜ ದೇವಸ್ಥಾನದ ಸಂರಕ್ಷಣೆಗಾಗಿ ” ಮನೆ ಸಂಪರ್ಕ ಜನಜಾಗರಣ ಅಭಿಯಾನ” ಕ್ಕೆ ಚಾಲನೆ ನೀಡಲಾಗುತ್ತದೆ ಮತ್ತು ಯತಿವರೇಣ್ಯರ ಕೂಡುವಿಕೆಯಲ್ಲಿ ಸಮಾವೇಶ ಮಾಡುತ್ತೇವೆ ಎಂದು ಅವರು ಹೇಳಿದರು.
ಕಾರಿಂಜ ದೇವಸ್ಥಾನದ ಸುತ್ತಮುತ್ತ ಇರುವ ಗಣಿಗಾರಿಕೆಯನ್ನು ಜಿಲ್ಲಾಡಳಿತ ಶೀಘ್ರವಾಗಿ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿ ದ್ದಾರೆ. ಮನೆ ಸಂಪರ್ಕ ದಲ್ಲಿ ಕನಿಷ್ಟ ಒಂದು ಲಕ್ಷ ಸಹಿ ಸಂಗ್ರಹ ಮಾಡುವುದು ಹಾಗೂ ರಾಜ್ಯಪಾಲ , ಮುಖ್ಯಮಂತ್ರಿ, ಮುಜರಾಯಿ ಸಚಿವ ಹಾಗೂ ಗಣಿ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು. ಅದರ ಜೊತೆಗೆ ಹೋರಾಟಕ್ಕೆ ಇನ್ನಷ್ಟು ಬಲನೀಡುವುದಕ್ಕಾಗಿ ಶಿವರಾತ್ರಿಯ ದಿನದಂದು “ಶಿವಮಾಲಾಧಾರಣೆ’ ಮಾಡಿ ಕಾರಿಂಜ ದೇವಸ್ಥಾನಕ್ಕೆ ಬೇಟಿ ನೀಡುವುದು ಮುಖ್ಯ ಕಾರ್ಯಕ್ರಮ ವಾಗಿದೆ ಎಂದರು.
ಸರಕಾರ ಮತ್ತು ಜಿಲ್ಲಾಡಳಿತ ಕ್ಕೆ ಬೇಡಿಕೆ
ಕಾರಿಂಜ ದೇವಸ್ಥಾನದ ಸುತ್ತ ಮುತ್ತ 10 ಕಿ.ಮೀ ವ್ಯಾಪ್ತಿಯನ್ನು ಧಾರ್ಮಿಕ ಸೂಕ್ಷ್ಮ ವಲಯ ಎಂದು ಘೋಷಿಸಿ ಅಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧಿಸಿ. ಹಿಂದೂ ಧರ್ಮದ ವರಿಗೆ ಮಾತ್ರ ಕ್ಷೇತ್ರ ಕ್ಕೆ ಪ್ರವೇಶ ಕ್ಕೆ ಅವಕಾಶ ನೀಡಿ. ಅಲ್ಲಿ ಯಾವುದೇ ಅಹಿತಕರ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಳ್ಳಲು ಆಗ್ರಹ. ಪ್ರವಾಸೋದ್ಯಮ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ಯಾಗದಂತೆ ಎಚ್ಚರ ವಹಿಸಬೇಕು. ಗೋಮಾಳಕ್ಕೆ ಬೇಲಿ ಹಾಕಿ ರಕ್ಷಣೆ ಮಾಡಿ, ಹಿಂದೂ ರುದ್ರಭೂಮಿ ಕಾಪಾಡಿ ಅದಕ್ಕೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಿ. ಸ್ಫೋಟ ದಿಂದ ಗಣಿ ಲೂಟಿಯಿಂದ ಅರಣ್ಯ ನಾಶದಿಂದ ಕ್ಷೇತ್ರ ಕ್ಕಾದ ಆರ್ಥಿಕ ನಷ್ಟ ಕ್ಕೆ ಪರಿಹಾರ ನೀಡಿ. ಸರಕಾರಿ ಜಾಗ, ಗೋಮಾಳದ ಅತಿಕ್ರಮಣ, ಗಣಿಲೂಟಿ ಮಾಡಿದ ರನ್ನು ಮತ್ತು ಅದಕ್ಕೆ ಬೆಂಬಲ ನೀಡಿದವರನ್ನು ಶಿಕ್ಷಿಸಿ ದಂಡ ವಸೂಲಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ್ ಶೆಟ್ಟಿ ಕಲ್ಲಡ್ಕ, ಪುತ್ತೂರು ಜಿಲ್ಲಾ ಕಾರ್ಯದರ ನರಸಿಂಹ ಮಾಣಿ, ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ತಾಲೂಕು ಪ್ರಧಾನ ಕಾರ್ಯದರ್ಶಿ ಯೋಗೀಶ್ ತುಂಬೆ ಉಪಸ್ಥಿತರಿದ್ದರು.