ಕೆಲವು ದಿನಗಳ ಹಿಂದೆ ನಾನು ವಾಟ್ಸಾಪ್ನಲ್ಲಿ ಒಂದು ವೀಡಿಯೊ ನೋಡಿದೆ. ಅದರಲ್ಲಿ ಮಾರ್ಕ್ ಎಂಬ ಯುವ ಕ್ರೀಡಾಪಟು ಹೀಗೆ ಹೇಳುತ್ತಾನೆ: “ನನ್ನ ಸ್ನೇಹಿತರಿಂದಾಗಿ ನನ್ನ ಬಾಲ್ಯದ ಕನಸುಗಳೆಲ್ಲವೂ ನುಚ್ಚುನೂರಾದವು. ನಾವು ಮದ್ಯಪಾನಿಗಳು ಮತ್ತು ಮಾದಕದ್ರವ್ಯ ವ್ಯಸನಿಗಳ ಸ್ನೇಹ ಬೆಳೆಸಿದರೆ ನಮ್ಮ ಜೀವನ ಕೊನೆಗೊಂಡಂತೆ! ನಮ್ಮ ಸ್ನೇಹಿತರನ್ನು ನೋಡಿದರೆ ನಾವು ಯಾರೆಂದು ತಿಳಿಯುತ್ತದೆ”.
ಮಾರ್ಕ್ಗೆ ತನ್ನ ಜೀವನದಲ್ಲಿ ಇನ್ನೇನೂ ಉಳಿದಿಲ್ಲ ಎಂದು ಅನಿಸುತ್ತಿತ್ತು. ಜೀವನವೇ ಬೇಡ ಎಂದು ಎನಿಸಿದ ಅವನಿಗೆ ಆತ್ಮಹತ್ಯೆ ಮಾಡಲು ಮನಸ್ಸಾಗುತ್ತಿತ್ತು. ಆತನ ತಾಯಿಯ ಆಕಸ್ಮಿಕ ಸಾವು ಆತನನ್ನು ವಾಸ್ತವಕ್ಕೆ ತಂದಿತು. ಆತನಿಗೆ ಬದುಕಬೇಕು ಅನಿಸಿತು. ಬೇರೆಯವರ ಸಹಾಯ ಪಡೆದು ಆತ್ಮಹತ್ಯೆಯ ಯೋಚನೆಯನ್ನು ಬಿಟ್ಟು ಹೊಸ ಜೀವನವನ್ನು ಆರಂಭಿಸಿದನು. ಇವತ್ತು ಅವನಿಗೆ ಒಳ್ಳೆಯ ಕೆಲಸವಿದೆ, ಆತ್ಮೀಯ ಕುಟುಂಬವಿದೆ ಮಾತ್ರವಲ್ಲ ಆತನು ಯುವಕರಿಗೆ ಹೊಸ ಜೀವನ ನಡೆಸಲು ಸಹಾಯ ಮಾಡುತ್ತಾನೆ.
ಈ ವಿಡಿಯೋ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿ “ಗಿವ್ ಲೈಫ್ ಎ ಚಾನ್ಸ್” ಎಂಬ ಧ್ಯೇಯಕ್ಕೆ ಆದ್ಯತೆ ನೀಡಲು ಯೋಚಿಸಿದೆ. ಇಂದಿನ ಪ್ರಪಂಚದಲ್ಲಿ ಎಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿದೆ…ಬದುಕಿಗಿಂತ ಸಾವಿನ ಕಡೆ ಜನರು ವಾಲುತ್ತಿದ್ದಾರೆ. ದಿನಪತ್ರಿಕೆಗಳಲ್ಲಿ ಆತ್ಮಹತ್ಯೆಯ ಸುದ್ದಿಗಳಿಗೆ ಬರಗಾಲವಿಲ್ಲ. ಎಂತಹ ದುರದೃಷ್ಟ! ಮೃತ್ಯುವಿನ ಮೇಲೆ ಜಯ ಸಾಧಿಸಿ ಬದುಕಲು ಕಲಿಯುವುದಕ್ಕೆ ಇದು ಸಕಾಲ.
ಈ ನಿಟ್ಟಿನಲ್ಲಿ, ಸುಶೆಗ್ ಚ್ಯಾರಿಟೆಬಲ್ ಟ್ರಸ್ಟ್ನ ಅಂಗ ಸಂಸ್ಥೆಯಾದ ಸೂಸೈಡ್ ಲೈಫ್ಲೈನ್ ಹಾಗೂ ರೋಶನಿ ನಿಲಯ ಸೆಂಟರ್ ಹ್ಯೂಮನ್ ಟ್ರಾನ್ಸೊಮೇಶನ್ ಇದರ ಜಂಟಿ ಆಶ್ರಯದಲ್ಲಿ ಶನಿವಾರ ಎಪ್ರಿಲ್ 23, 2022ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಯೋಜಿಸಿರುವ ‘ಗಿವ್ ಲೈಫ್ ಎ ಚಾನ್ಸ್’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇವೆ. ಆತ್ಮಹತ್ಯೆಯನ್ನು ತಡೆಗಟ್ಟುವ ಬಗ್ಗೆ ಹಾಗೂ ಆತ್ಮಹತ್ಯೆಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು ಹಾಕುವ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ ಅವರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಇಡೀ ದಿನದ ಕಾರ್ಯಕ್ರಮದಲ್ಲಿ ವಿವಿಧ ವಿನೋದಾವಳಿಗಳು ಮತ್ತು ಮಾನಸಿಕ ಆರೋಗ್ಯದ ತಪಾಸಣೆಯ ಜೊತೆಗೆ ವಿವಿಧ ವಸ್ತುಗಳ ಮಾರಾಟವೂ ಇರುವುದು.
ಆತ್ಮಹತ್ಯೆ ಮಾಡಿಕೊಳ್ಳುವವರು ಸಾಮಾನ್ಯವಾಗಿ ತಮ್ಮ ನಿರ್ಧಾರದ ಬಗ್ಗೆ ಮುನ್ಸೂಚನೆಗಳನ್ನು ನೀಡುತ್ತಾರೆ. ಹಾಗಾಗಿ ಈ ಲಕ್ಷಣಗಳುಯಾವುದೆಂದು ತಿಳಿದುಕೊಂಡರೆ ಮನೆಯವರಿಗೆ, ವ್ಯಕ್ತಿಯ ಪ್ರೀತಿಪಾತ್ರರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ.
ಆತ್ಮಹತ್ಯೆ ಮಾಡಿಕೊಳ್ಳುವವರು ತೋರ್ಪಡಿಸುವ ಕೆಲವು ಲಕ್ಷಣಗಳು ಹೀಗಿವೆ: ಖಿನ್ನತೆಯಿಂದ ಅಥವಾ ಬೇಸರದಿಂದ ಇರುವುದು, ಸಾವು ಅಥವಾ ಆತ್ಮಹತ್ಯೆಯ ಬಗ್ಗೆ ಬರೆಯುವುದು ಅಥವಾ ಮಾತನಾಡುವುದು, ಒಬ್ಬಂಟಿಯಾಗಿರಲು ಬಯಸುವುದು, ನಿರಾಶೆ ಅಥವಾ ಹತಾಶಾಮನೋಭಾವನೆ, ಸಣ್ಣಪುಟ್ಟ ವಿಷಯಗಳಿಗೆ ಸಿಟ್ಟಾಗುವುದು, ಮನೋಸ್ಥಿತಿಯಲ್ಲಿ ಹಠಾತ್ತ್ ಬದಲಾವಣೆಗಳಾಗುವುದು, ಮದ್ಯಪಾನ ಅಥವಾ ಮಾದಕ ದ್ರವ್ಯ ವ್ಯಸನ, ವ್ಯಕ್ತಿತ್ವದಲ್ಲಿ ಬದಲಾವಣೆ, ದುಡುಕು ಸ್ವಭಾವ, ಯಾವುದೇ ಕೆಲಸಕಾರ್ಯಗಳಲ್ಲಿ ಆಸಕ್ತಿ ತೋರಿಸದಿರುವುದು, ನಿದ್ರಾಹೀನತೆ/ಅತಿಯಾದ ನಿದ್ರೆ, ಹಸಿವಿಲ್ಲದಿರುವುದು, ಕೆಲಸಕ್ಕೆ ಗೈರುಹಾಜರಾಗುವುದು, ಕಲಿಕೆಯ ನಿರ್ಲಕ್ಷ ಇತ್ಯಾದಿ.
ನೀವೇನು ಮಾಡಬಹುದು?
ಯಾತನಾಮಯ ಮನೋಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ: ನಿಮ್ಮ ಆತ್ಮೀಯ ವ್ಯಕ್ತಿಯು ಮೇಲಿನ ಲಕ್ಷಣಗಳನ್ನು ತೋರ್ಪಡಿಸುವಾಗ ಅವರಿಗೆ ಗಮನನೀಡಿ. ಅವರು ಹೇಳುವುದನ್ನು ಆಲಿಸಿ. ಅವರು ತಮ್ಮ ಮನಬಿಚ್ಚಿ ಮಾತನಾಡಲು ಅವಕಾಶ ಕೊಡಿ ಅಥವಾ ಅವರಿಗೆ ನುರಿತ ತಜ್ಞರ ಸಹಾಯ ದೊರೆಯುವಂತೆ ಮಾಡಿ.
ಸಾಂತ್ವನ ನೀಡುವುದು: ಆ ವ್ಯಕ್ತಿಗೆ ಆತ್ಮಹತ್ಯೆ ಮಾಡುವ ಯೋಚನೆ ಬರುತ್ತದೆಯೇ ಎಂದು ಕೇಳಿ. ಆತ್ಮಹತ್ಯೆಯ ಬಗ್ಗೆ ಬೇರೆಯವರೊಡನೆ ಮಾತನಾಡುವುದರಿಂದ ಆತ್ಮಹತ್ಯೆ ಮಾಡುವ ಯೋಚನೆ ಕಡಿಮೆಯಾಗುತ್ತದೆ. ಆದರೆ ಅಂತಹ ವ್ಯಕ್ತಿಯ ಸುರಕ್ಷತೆಯ ಕಡೆಗೂ ಗಮನ ಕೊಡಬೇಕಾಗುತ್ತದೆ.
ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ನಿರ್ದಿಷ್ಟವಾದ ಯೋಚನೆಗಳಿವೆಯೇ ಎಂದು ಗಮನಿಸಿ. ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿರುವ ಔಷಧಗಳು, ಹರಿತವಾದ ಆಯುಧಗಳು ಮುಂತಾದವುಗಳು ಅವರ ಕೈಗೆ ಸಿಗದಂತೆ ಅಡಗಿಸಿ ಇಡಿ. ಯಾವಾಗಲೂ ಅವರ ಜೊತೆಗೆ ಇದ್ದು ಅವರಿಗೆ ಸಾಂತ್ವನ ನೀಡಿ. ಆತ್ಮಹತ್ಯೆಯ ಬಗ್ಗೆ ಮಾತನಾಡುವಾಗ ನಿಮಗೆ ಗಾಬರಿಯಾದರೂ ಮನಸ್ಸನ್ನು ಶಾಂತವಾಗಿಟ್ಟು ಅವರಿಗೆ ಬೇಕಿರುವ ಎಲ್ಲಾ ಸಹಾಯ ನೀಡುವುದಾಗಿ ಆಶ್ವಾಸನೆ ನೀಡಿ. ಮನೆಯ ಯಾವುದಾದರೂ ಒಬ್ಬ ಸದಸ್ಯರು, ಧರ್ಮಗುರುಗಳು ಅಥವಾ ಮನೋರೋಗ ತಜ್ಞರನ್ನು ಭೇಟಿಮಾಡಲು ಅವಕಾಶ ಕಲ್ಪಿಸಿಕೊಡಿ.
ಪರಿಸ್ಥಿತಿ ತಾನಾಗಿಯೇ ಸರಿ ಹೋಗುತ್ತದೆ ಎಂದು ಯೋಚಿಸಿ “ಅಂತಹ ಯೋಚನೆಗಳನ್ನು ಬಿಟ್ಟುಬಿಡು” ಎಂದು ಅವರೊಡನೆ ಹೇಳಬೇಡಿ. ಅವರು ಹೇಳಿದ್ದನ್ನು ಗೌಪ್ಯವಾಗಿ ಇಡಬೇಡಿ ಯಾಕೆಂದರೆ ಅವರ ಪ್ರಾಣ ಉಳಿಸುವುದು ಗೌಪ್ಯತೆ ಕಾಪಾಡುವುದಕ್ಕಿಂತ ಹೆಚ್ಚು ಅಗತ್ಯ. ಆದಷ್ಟೂ ಅವರ ಜೊತೆಗೆಯೇ ಇರಿ. ಪ್ರಾಣಾಪಾಯವಿದ್ದರೆ 108ಗೆ ಕರೆ ಮಾಡಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿ.ತುರ್ತು ಚಿಕಿತ್ಸೆ: ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುವವರಿಗೆ ಪ್ರಪ್ರಥಮವಾಗಿ ಬೇಕಾಗಿರುವುದು ಏನೆಂದರೆ ತಕ್ಷಣದ ಚಿಕಿತ್ಸೆ.
ಆತ್ಮಹತ್ಯೆಯನ್ನು ಖಂಡಿತವಾಗಿಯೂ ತಡೆಗಟ್ಟಬಹುದು. ಇದಕ್ಕೆ ಪೂರಕವಾದ ಮಾಹಿತಿ ಇಲ್ಲಿದೆ:
ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಸಹಾಯ ಮಾಡಲು ಸೂಸೈಡ್ ಹೆಲ್ಪ್ಲೈನ್ 2017ರಿಂದ ನುರಿತ ಸ್ವಯಂಸೇವಕರ ಸಹಾಯದಿಂದ ಹಗಲಿರುಳು ಶ್ರಮಿಸುತ್ತಿದೆ. ಯಾರಿಗಾದರೂ ನಮ್ಮಿಂದ ಸಹಾಯವಾಗಬೇಕು ಎಂದು ನಿಮಗೆ ಅನಿಸಿದರೆ 0824-2983444ಗೆ ಕರೆ ಮಾಡಿ. ವೃತ್ತಿಪರ ತರಬೇತಿ ಪಡೆದ ಹಲವಾರು ಭಾಷೆಗಳನ್ನು ಮಾತನಾಡಲು ತಿಳಿದಿರುವ ಸಿಬ್ಬಂದಿ ತುರ್ತು ಕರೆಗಳನ್ನು ಸ್ವೀಕರಿಸುತ್ತಾರೆ. ಈ ಕರೆಗಳನ್ನು ತಕ್ಷಣ ಆತ್ಮಹತ್ಯೆ ತಡೆಯುವಲ್ಲಿ ತರಬೇತಿ ಪಡೆದ ಸ್ವಯಂಸೇವಕರಿಗೆ ವರ್ಗಾಯಿಸಲಾಗುತ್ತದೆ. ಇಡೀ ಪ್ರಕ್ರಿಯೆಯನ್ನು ಗೌಪ್ಯವಾಗಿ ಮಾಡಲಾಗುತ್ತದೆ.
ನಿಮಗೆ ಸ್ವಯಂಸೇವಕರಾಗಲು ಮನಸ್ಸಿದ್ದಲ್ಲಿ susheglifeline@gmail.comಗೆ ಸಂಪರ್ಕಿಸಿ. ಮುಂದಿನ ಸ್ವಯಂಸೇವಕರ ತರಬೇತಿಯ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ನೀಡಲಾಗುವುದು.
ಕೊನೆಯದಾಗಿ ಜೀವನದಲ್ಲಿ ಯಾತನೆ ಅನುಭವಿಸುತ್ತಿರುವ ವ್ಯಕ್ತಿಗೆ ಭಾವನಾತ್ಮಕ ಸಾಂತ್ವನ ನೀಡುವುದು ನಮ್ಮೆಲ್ಲರ ಕರ್ತವ್ಯ. ನಾವೆಲ್ಲರೂ ಕೈಜೋಡಿಸಿ ಆತ್ಮಹತ್ಯೆಯನ್ನು ತಡೆಗಟ್ಟೋಣ! “ಬದುಕಲು ಕಲಿಯೋಣ” ಎಂಬುದು ನಮ್ಮ ಧ್ಯೇಯವಾಕ್ಯವಾಗಿರಲಿ. ಶನಿವಾರ ಎಪ್ರಿಲ್ 23, 2022ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಂಗಳೂರಿನ ವೆಲೆನ್ಸಿಯಾದ ರೋಶನಿ ನಿಲಯದಲ್ಲಿ ಭೇಟಿಯಾಗೋಣ.