ಶಿವಮೊಗ್ಗ: ಹುಬ್ಬಳ್ಳಿ ಗಲಭೆಯ ಪ್ರಚೋದನೆಗೆ ನೇರ ಕಾರಣನಾಗಿ ತಲೆ ಮರೆಸಿಕೊಂಡಿರುವ ಮೌಲ್ವಿಯನ್ನು ತಕ್ಷಣ ಬಂಧಿಸುವಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಜೀಪಿನ ಮೇಲೆ ನಿಂತು, ತಲೆ ಕತ್ತರಿಸಿ ಎಂದು ಉಗ್ರ ಪ್ರಚೋದನಾತ್ಮಕ ಕುಮ್ಮಕ್ಕು ನೀಡಿದ್ದಾನೆ. ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡೆಯುವಂತೆ ಅಲ್ಲಿನ ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರು ಪ್ರಚೋದನೆ ನೀಡಿದ್ದಾರೆ. ಆಂಜನೇಯ ದೇವಸ್ಥಾನ, ಆಸ್ಪತ್ರೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಅವರೆಲ್ಲರನ್ನು ಬಂಧಿಸುವಂತೆ ಆಗ್ರಹಿಸಿದರು.
ಕೋಮು ಗಲಭೆ ನಡೆಸುವ ಮುಸಲ್ಮಾನ ಪುಂಡರನ್ನು ಎದುರಿಸುವ ಶಕ್ತಿ ಹಿಂದೂ ಸಂಘಟನೆಗೆ ಇದೆ. ಆದರೆ ಹಿಂದೂಗಳು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಕಲ್ಲು ಹೊಡೆಸಿದ ರಾಷ್ಟ್ರ ದ್ರೋಹಿ ಈಗ ತಲೆ ಮರೆಸಿಕೊಂಡಿದ್ದಾನೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಗೂಂಡಾ ಕಾಯ್ದೆ ಅಡಿ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದರು.
ಕರ್ನಾಟಕ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಯುತ್ತಿರುವುದನ್ನು ಸಹಿಸದ ಕಾಂಗ್ರೆಸ್ ನಾಯಕರು ಇಂತಹ ಘಟನೆಗಳನ್ನು ಖಂಡಿಸಲು ತಯಾರಿಲ್ಲ. ಕಲ್ಲಂಗಡಿ ಒಡೆದರೆ ಬೊಬ್ಬೆ ಹಾಕುವ ಕಾಂಗ್ರೆಸಿಗರು ತಲೆ ಒಡೆದರೆ ಸುಮ್ಮನಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರ್ಸೆಂಟೇಜ್ ವಿಷಯದಲ್ಲಿ ಈಶ್ವರಪ್ಪ ನಿರಪರಾಧಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಏಜೆಂಟ್ ಆಗಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುಮ್ಮನೆ ಆರೋಪ ಮಾಡಿದ್ದಾರೆ. ಪರ್ಸೆಂಟೇಜ್ ಬಗ್ಗೆ ಕೆಂಪಣ್ಣ ಹಾಗೂ ಕಾಂಗ್ರೆಸ್ ನಾಯಕರ ಬಳಿ ಒಂದು ಉದಾಹರಣೆ ಇದ್ದರೆ ಬಹಿರಂಗ ಮಾಡಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯನವರಿಗೆ ಮುಸಲ್ಮಾನರನ್ನು ತೃಪ್ತಿಪಡಿಸಿ ಓಲೈಕೆ ಮಾಡುವ ಹಾಗೂ ಪರ್ಸೆಂಟೇಜ್ ಜಪ ಬಿಟ್ಟರೆ ಬೇರೆ ಏನೂ ಹೇಳುತ್ತಿಲ್ಲ. ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿ ಕೂರಲು ಬೇಕಾಗುವಷ್ಟು ಸೀಟುಗಳು ಕಾಂಗ್ರೆಸ್ ಗೆ ಲಭ್ಯವಾಗುವುದಿಲ್ಲ ಎಂದು ಹೇಳಿದರು.