ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ 11 ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳವು ಎ.17 ರಂದು ನಡೆಯಲಿದೆ ಎಂದು ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಅವರು ಹೇಳಿದ್ದಾರೆ.
ಗುರುವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಅತೀ ಕಡಿಮೆ ಅವಧಿಯಲ್ಲಿ ಕಂಬಳದ ಕರೆ ನಿರ್ಮಿಸಿ , ಕಂಬಳ ಕೂಟವನ್ನು ಆಯೋಜಿಸಿರುವುದು ಕಂಬಳ ಇತಿಹಾಸದಲ್ಲಿ ಪ್ರಥಮವಾಗಿದೆ ಎಂದು ಹೇಳಿದರು.
ಬಯಲು ಕಂಬಳ ಕೂಟದಲ್ಲೇ ವಿಶಿಷ್ಠ, ವಿನೂತನ ಶೈಲಿಯಲ್ಲಿ ತಾಲೂಕಿನ ಕಾವಳಕಟ್ಟೆಯಲ್ಲಿ ನಡೆಯುತ್ತಿದ್ದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳವು ಕಾರಣಾಂತರಗಳಿಂದ ಕೆಲ ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಕಂಬಳ ಅಭಿಮಾನಿಗಳ ಆಶಯದಂತೆ ಮತ್ತೆ ಬಂಟ್ವಾಳ ನಗರ ಪ್ರದೇಶದಿಂದ ಮೂರು ಕಿ.ಮೀ.ದೂರದ ನಾವೂರದ ಪ್ರಕೃತಿ ರಮಣೀಯವಾದ ಸ್ಥಳದಲ್ಲಿ ಮೂಡೂರು-ಪಡೂರು ಹೆಸರಿನಲ್ಲಿಯೇ “ಬಂಟ್ವಾಳ ಕಂಬಳ “ವಾಗಿ ಮೂಡಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಶುಭಾರ್ಶೀವಾದದೊಂದಿಗೆ ಕಂಬಳಕೂಟವನ್ನು ಸೊಲೂರು
ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂತೊನಿ ಚರ್ಚ್ ನ ಧರ್ಮಗುರು ಫೆಡ್ರಿಕ್ ಮೊಂತೆರೊ, ಸುಲ್ತಾನ್ ನಗರ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಜ.ಮೊಹಮ್ಮದ್ ನಾಸೀಹ್ ದಾರಿಮಿ ಮೊದಲಾದವರು ಉದ್ಘಾಟನಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್ ನ ವಿಪಕ್ಷ ನಾಯ ಬಿ.ಕೆ.ಹರಿಪ್ರಸಾದ್ ,ಎಸ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಸಹಿತ ಹಲವಾರು ಗಣ್ಯರು ಸಾಮಾಜಿಕ,ರಾಜಕೀಯ ಮುಖಂಡರು,ತುಳು ಚಲನಚಿತ್ರ ಕಲಾವಿದರು ಭಾಗವಹಿಸಲಿದ್ದಾರೆ ಎಂದರು. ಇದೇ ವೇಳೆ ನೂತನ ಕಂಬಳ ಸಮಿತಿಯನ್ನು ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಅವರು ಘೋಷಿಸಿದರು. ಹಾಗೆಯೇ ಕಂಬಳದ ಅಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ .ರೋಡ್ರಿಗಸ್, ಸಂಚಾಲಕ ಪದ್ಮಶೇಖರ್ ಜೈನ್ ಕಾರ್ಯಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಅವಿಲ್ ಮಿನೇಜಸ್, ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಮಾಯಿಲಪ್ಪ ಸಾಲ್ಯಾನ್, ಕಂಬಳ ಸಮಿತಿ ಸದಸ್ಯರಾದ ಶಬೀರ್, ಡೆನ್ಜಿಲ್ ಮತ್ತಿತರರು ಉಪಸ್ಥಿತರಿದ್ದರು.