ಉಳ್ಳಾಲ : ಕಲ್ಲಾಪು ಬಳಿ ಮೀನು ಮಾರಾಟ ನಡೆಸುತ್ತಿರುವ ವ್ಯಾಪಾರಿಯನ್ನು ತಡೆದ ಮೂವರು ಮುಸುಕುಧಾರಿ ತಂಡ ತಲವಾರಿನಿಂದ ಹಲ್ಲೆ ಮಾಡಿದ್ದು, ಟೆಂಪೋದಲ್ಲಿದ್ದ ₹2 ಲಕ್ಷ ದರೋಡೆ ಮಾಡಿದೆ.
ನಗರದ ನೇತ್ರಾವತಿ ಸೇತುವೆ ಸಮೀಪ ಶನಿವಾರ ನಸುಕಿನ ಜಾವ ಈ ಘಟನೆ ನಡೆದಿದೆ. ಉಳ್ಳಾಲ ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಮುಸ್ತಾಫ ದರೋಡೆಗೆ ಒಳಗಾದವರು.
ಕಲ್ಲಾಪು ಸಮೀಪ ಮೀನು ಮಾರಾಟ ಮಾಡುತ್ತಿರುವ ಇವರು ಎಂದಿನಂತೆ ಮನೆಯಿಂದ ಧಕ್ಕೆಗೆ ಟೆಂಪೋ ಮೂಲಕ ಮೀನು ಖರೀದಿಸಲು ತೆರಳುತ್ತಿದ್ದರು. ಈ ವೇಳೆ ತೊಕ್ಕೊಟ್ಟು ಕಡೆಯಿಂದ ಕಾರಿನಲ್ಲಿ ತಂಡವೊಂದು ಟೆಂಪೋವನ್ನು ಹಿಂಬಾಲಿಸಿದೆ. ನೇತ್ರಾವತಿ ಸೇತುವೆ ಸಮೀಪ ಅಡ್ಡಗಟ್ಟಿದೆ. ಬಳಿಕ ನಿರಂತರ ಹಾರನ್ ಹಾಕುವುದನ್ನು ಪ್ರಶ್ನಿಸಲು ಮುಸ್ತಾಫ ಅವರು ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಮುಸುಕುಧಾರಿಗಳು ತಲವಾರಿನಿಂದ ದಾಳಿ ನಡೆಸಿದ್ದಾರೆ.
ಟೆಂಪೋ ಡ್ಯಾಷ್ ಬೋರ್ಡಿನಲ್ಲಿರಿಸಿದ್ದ ₹2 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಗಾಯಾಳು ಮುಸ್ತಾಫ ಅವರನ್ನು ರಸ್ತೆ ಮೂಲಕ ತೆರಳುತ್ತಿದ್ದ ವ್ಯಕ್ತಿಯೊಬ್ಬರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಸಿಪಿ ದಿನಕರ್ ಶೆಟ್ಟಿ ನೇತೃತ್ಬದ ಪೊಲೀಸ್ ತಂಡ ತನಿಖೆ ಆರಂಭಿಸಿದೆ.