ಬೆಳ್ತಂಗಡಿ:ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ -19 ನ ಸಾಂಕ್ರಾಮಿಕತೆಯನ್ನು ತಡೆಗಟ್ಟುವಲ್ಲಿ ವೃತ್ತಿಪರತೆಯನ್ನು ಮೆರೆದಿದ್ದಕ್ಕಾಗಿ ಅಲ್ಲಿನ ಲೆಫ್ಟಿನೆಂಟ್ ಗವರ್ನರ್, ಬೆಳ್ತಂಗಡಿ ತಾಲೂಕಿನ ವೈದ್ಯರೊಬ್ಬರನ್ನು ಗೌರವಿಸಿದ್ದಾರೆ.
ತಾಲೂಕಿನ ಉಜಿರೆ ನಿವಾಸಿ,ಭಾರತಿ ಪುಸ್ತಕ ಭಂಡಾರದ ಮಾಲಕ ಸಿ.ಎಂ.ಗೋಖಲೆ-ರೇಖಾ ದಂಪತಿಯ ಪುತ್ರ ಡಾ. ಸಚಿನ್ ಗೋಖಲೆ ಕಳೆದೊಂದು ವರ್ಷದಿಂದ ಜಮ್ಮುವಿನಲ್ಲಿ ವೈದ್ಯಕೀಯದ ಉನ್ನತ ಶಿಕ್ಷಣ ಪಡೆಯುತ್ತಿದ್ದಾರಲ್ಲದೆ ಅಲ್ಲಿನ ಗಾಂಧಿನಗರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಅಲ್ಲಿನ ಅನೇಕ ವೈದ್ಯರು, ದಾದಿಯರು,ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ಕೇಂದ್ರಾಡಳಿತ ಪ್ರದೇಶದಲ್ಲಿ ರೋಗವನ್ನು ನಿಯಂತ್ರಿಸುವಲ್ಲಿ ಮತ್ತು ಲಸಿಕೆ ನೀಡುವುದರಲ್ಲಿ ಹಗಲು ರಾತ್ರಿ ಸತತ ಶ್ರಮಪಟ್ಟಿರುವುದನ್ನು ಆಡಳಿತ ಗುರುತಿಸಿದೆ.
ಸುಮಾರು ಒಂದು ತಿಂಗಳು ಹೆಚ್ಚು ಕಾಲ ಸರಕಾರಿ ಆಸ್ಪತ್ರೆಯಲ್ಲೇ ಡಾ.ಸಚಿನ್ ಗೋಖಲೆಯವರಿದ್ದು ಹಲವಾರು ರೋಗಿಗಳ ಶುಶ್ರೂಷೆ ಮಾಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಕೇವಲ ಇವರೊಬ್ಬರು ಮಾತ್ರ ಸೇವೆ ಸಲ್ಲಿಸಿದ್ದನ್ನು ಆಸ್ಪತ್ರೆಯ ಆಡಳಿತ ಗುರುತಿಸಿದೆ. ಹೀಗಾಗಿ ಗುರುತಿಸಲ್ಪಟ್ಟ 50 ಮಂದಿ ವಾರಿಯರ್ಸ್ಗಳ ಪಟ್ಟಿಯಲ್ಲಿ ವಿದ್ಯಾರ್ಥಿಯೊಬ್ಬರು ಇವರು ಮಾತ್ರ ಇರುವುದು ವಿಶೇಷವಾಗಿದೆ.ಅ.7 ರಂದು ಅಲ್ಲಿನ ರಾಜ್ಯಪಾಲ ಮನೋಜ್ ಸಿನ್ಹಾ ಅವರು ಶ್ರೀನಗರದಲ್ಲಿ ಸಚಿನ್ ಗೋಖಲೆ ಅವರನ್ನು ಗೌರವಿಸಿದರು.
ಉಜಿರೆಯ ವೈದ್ಯರಿಗೆ ಜಮ್ಮುವಿನಲ್ಲಿ ಸನ್ಮಾನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.