ಬೆಳ್ತಂಗಡಿ : ಇಲ್ಲಿನ ಶ್ರೀನಗರದಲ್ಲಿರುವ ಹೇಮಂತ ಭಿಡೆಯವರ ಸ್ವಂತ ಜಾಗದಲ್ಲಿ ಹಸಿರುವನ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಪರಿಸರವಾದಿ,ಉಜಿರೆ ಎಸ್.ಡಿ.ಎಂ. ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾರಾದ ಆರ್.ಎನ್.ಭಿಡೆ ಮತ್ತು ಸುಶೀಲಾ ಭಿಡೆಯವರ ಸ್ಮರಣಾರ್ಥ ಹಸಿರುವನ ನಿರ್ಮಿಸುವ ಯೋಜನೆಯನ್ನು, ಅವರ ಪುತ್ರ ನಿವೃತ್ತ ಬ್ಯಾಂಕ್ ಅಧಿಕಾರಿ ಹೇಮಂತ ಭಿಡೆಯವರು ಹಮ್ಮಿಕೊಂಡಿದ್ದು, ಅರಣ್ಯ ಇಲಾಖೆಯ ಸಹಯೋಗದಲ್ಲಿ ಪ್ರಥಮ ಹಂತದ ಗಿಡಗಳ ನಾಟಿ ಕಾರ್ಯ ಆರಂಭವಾಗಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಗಿಡಗಳನ್ನು ನೆಡಲಾಗುತ್ತದೆ.ಮತ್ತು ಇಲ್ಲಿ ಸ್ಥಳೀಯರ ಉಪಯೋಗಕ್ಕಾಗಿ ಪಾರ್ಕ್ ಒಂದನ್ನು ನಿರ್ಮಿಸುವ ಕುರಿತು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ವಲಯ ಅರಣ್ಯಾಧಿಕಾರಿ ಹರಿಪ್ರಸಾದ್,ಅರಣ್ಯ ರಕ್ಷಕ ಶರತ್ ಶೆಟ್ಟಿ, ಕಾತ್ಯಾಯಿನಿ ಭಿಡೆ, ಉದ್ಯಮಿ ಚಂದ್ರಶೇಖರ ಗೋಖಲೆ, ಡಾ. ಅರ್ಪಣಾ ಭಿಡೆ ಡಾ.ನರೇಂದ್ರ ಹುಲಿಕಲ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆಯವರನ್ನು ಅಭಿನಂದಿಸಲಾಯಿತು.
ಕಾರ್ಗಿಲ್ ನಲ್ಲಿ ಹುತಾತ್ಮರಾದ ಯೋಧರ ನೆನಪಿನಲ್ಲಿ ಮುಂಡಾಜೆಯ ಧುಂಬೆ ಟ್ಟಿನಲ್ಲಿ ಸಚಿನ್ ಭಿಡೆಯವರು ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಿರುವ ಕಾರ್ಗಿಲ್ ವನದಿಂದ ಪ್ರೇರಿತರಾಗಿ,ಭವಿಷ್ಯದ ಹಿತ ದೃಷ್ಟಿಯಲ್ಲಿ ಹಸಿರು ವನ ಬೆಳೆಸುವುದು ಅತಿ ಅಗತ್ಯವಾಗಿದ್ದು ಈ ಯೋಜನೆ ರೂಪಿಸಲಾಗಿದೆ ಎಂದು ಹೇಮಂತ ಭಿಡೆ ಹೇಳಿದರು.